ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಜನ್ಮದಿನ ಸರಳ ಆಚರಣೆ

ಸಿದ್ಧಗಂಗಾ ಮಠದ 2,000 ಮಕ್ಕಳಿಗೆ ಸಿಹಿ ಊಟ; ಗದ್ದುಗೆಯಲ್ಲಿ ರುದ್ರಾಭಿಷೇಕ
Last Updated 1 ಏಪ್ರಿಲ್ 2020, 13:34 IST
ಅಕ್ಷರ ಗಾತ್ರ

ತುಮಕೂರು: ಶಿವಕುಮಾರ ಸ್ವಾಮೀಜಿ 113ನೇ ಜನ್ಮದಿನದ ಕಾರ್ಯಕ್ರಮ ಸಿದ್ಧಗಂಗಾ ಮಠದಲ್ಲಿ ಬುಧವಾರ ಸರಳವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು.

ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಮಠಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಅದ್ಧೂರಿ ಆಚರಣೆಯನ್ನು ಮಠದ ಆಡಳಿತ ಮಂಡಳಿ ರದ್ದು ಮಾಡಿತ್ತು. ನಿತ್ಯದಂತೆ ಸ್ವಾಮೀಜಿ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಪೂಜೆ ನೆರವೇರಿಸಲಾಯಿತು. ಮುಂಜಾನೆ ಸಿದ್ದಲಿಂಗ ಸ್ವಾಮೀಜಿ ಇಷ್ಟಲಿಂಗ ಪೂಜೆ ನೆರವೇರಿಸಿ ಗದ್ದುಗೆಗೆ ಪೂಜೆ ಸಲ್ಲಿಸಿದರು.

ನಂತರ ಸಾಮಾಜಿಕ ಅಂತರ ಕಾಯ್ದುಕೊಂಡು ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಲಾಯಿತು. ಪ್ರತಿ ವರ್ಷ ಏ.1ರಂದು ಮಠಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಸಿಹಿ ಖಾದ್ಯಗಳನ್ನು ಪ್ರಸಾದ ರೂಪದಲ್ಲಿ ಉಣಬಡಿಸಲಾಗುತ್ತಿತ್ತು. ಈ ಸಲ ಯಾರೊಬ್ಬರೂ ಗದ್ದುಗೆ ದರ್ಶನಕ್ಕೆ ಬಂದಿರಲಿಲ್ಲ. ಮಧ್ಯಾಹ್ನ ಮಠದಲ್ಲಿರುವ 2 ಸಾವಿರ ವಿದ್ಯಾರ್ಥಿಗಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಧ್ಯಾನ ಮಂದಿರದಲ್ಲಿ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ‘ಎಂದೂ ಕಂಡರಿಯದ ಸ್ಥಿತಿಯಲ್ಲಿ ನಾವಿದ್ದೇವೆ. ಯಾರೊಬ್ಬರನ್ನೂ ಮುಟ್ಟದಂತಹ ಸನ್ನಿವೇಶ ಇದೆ. ದೇಶಕ್ಕೆ ಎದುರಾಗಿರುವ ಈ ಗಂಡಾಂತರ ದೂರವಾಗಲಿ ಎಂದು ಪ್ರಾರ್ಥಿಸಲಾಗಿದೆ’ ಎಂದು ಹೇಳಿದರು.

ಜನರಲ್ಲಿ ಭಯ, ಆತಂಕ ಮನೆ ಮಾಡಿದೆ. ವಿದೇಶಗಳಿಂದ ಬಂದವರು ನಮ್ಮ ದೇಶಕ್ಕೆ ಕೊರೊನಾ ಸೋಂಕು ತಂದಿದ್ದಾರೆ. ಇದರ ನಿಗ್ರಹಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ. ಜನಸಾಮಾನ್ಯರು ಸಹ ಮನೆಯಲ್ಲಿದ್ದು ರೋಗ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

‘ಪೂಜ್ಯರ ಭೌತಿಕ ದರ್ಶನ ನಮಗೆ ಇಲ್ಲ. ಆದರೆ ಭಾವನಾತ್ಮಕವಾದ ಭಕ್ತಿಯೊಂದಿಗೆ ಸ್ಮರಣೆ ಮಾಡುವ ಮೂಲಕ ನಮ್ಮ ಬದುಕನ್ನು ಹಸನು ಮಾಡಿಕೊಳ್ಳೋಣ’ ಎಂದು ಆಶಿಸಿದರು.

ಶಿವಕುಮಾರ ಸ್ವಾಮೀಜಿ ಎಂದೂ ಜನ್ಮದಿನ ಆಚರಿಸಿಕೊಂಡವರಲ್ಲ. ಭಕ್ತರ ಒತ್ತಾಯದ ಮೇರೆಗೆ ಹುಟ್ಟುಹಬ್ಬ ಆಚರಣೆಯನ್ನು ಗುರುವಂದನಾ ಮಹೋತ್ಸವವಾಗಿ ಆಚರಿಸಲಾಗುತ್ತಿತ್ತು ಎಂದರು.

ಶ್ರೀಗಳು ವೈಯಕ್ತಿವಾಗಿ ಏನನ್ನೂ ಬಯಸದೆ ಸಮಾಜಕ್ಕಾಗಿ ದುಡಿದರು. ಸಮಾಜಕ್ಕೆ ಬದುಕನ್ನು ಮುಡುಪಾಗಿಟ್ಟರು. ಶೈಕ್ಷಣಿಕವಾಗಿ ಕ್ರಾಂತಿ ಮಾಡಿದ ಸ್ವಾಮೀಜಿ, ಲಕ್ಷಾಂತರ ಮಕ್ಕಳ ಬದುಕು ಹಸನು ಮಾಡಿದ್ದಾರೆ ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT