ಕೊರಟಗೆರೆ: ದೇಶ ಕಾಯುವ ಸೈನಿಕರ ನೆನಪಿನಲ್ಲಿ ಕ್ರೀಡೆ ಏರ್ಪಡಿಸುವುದು ಅವರಿಗೆ ನೀಡುತ್ತಿರುವ ಗೌರವ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು.
ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಏರ್ಪಡಿಸಿಗಿದ್ದ ‘ಯೋಧ’ ಕಪ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ರೈತರ, ಸೈನಿಕರ ಸೇವೆ ಮತ್ತು ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ದೇಶ ರಕ್ಷಣೆಗಾಗಿ ಗಡಿ ಕಾಯುವ ಸೈನಿಕನಿಗೆ ನಾಳಿನ ಜೀವನ ಹಾಗೂ ಪ್ರಾಣದ ಬಗ್ಗೆ ನಂಬಿಕೆಯೂ ಇರುವುದಿಲ್ಲ. ತಮ್ಮನ್ನು ತಾವು ಮಾತೃಭೂಮಿಗಾಗಿ ಅರ್ಪಣೆ ಮಾಡಿಕೊಳ್ಳುತ್ತಾರೆ. ಅಂತಹ ಸೈನಿಕರ ಹೆಸರಿನಲ್ಲಿ ಪಂದ್ಯಾವಳಿಗಳನ್ನು ಏರ್ಪಡಿಸಿಸುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಜೂನಿಯರ್ ಕಾಲೇಜು ಮೈದಾನದಲ್ಲಿ ಈಗಾಗಲೆ ₹ 4.5 ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಪ್ರಾರಂಭವಾಗಿದೆ. ಹಾಲಿ ಇರುವ ಕ್ರೀಡಾಂಗಣದ ಮೈದಾನವನ್ನು ಸುಸಜ್ಜಿತವಾಗಿ ಮಾರ್ಪಾಡುಗೊಳಿಸಲಾಗುವುದು. ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ಪಾಲ್ಗೊಂಡರೆ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗುವುದರೊಂದಿಗೆ ಶೈಕ್ಷಣಿಕವಾಗಿ ಪ್ರಗತಿ ಹೊಂದಬಹುದಾಗಿದೆ ಎಂದರು.
ಕೆಪಿಸಿಸಿ ಸದಸ್ಯ ದಿನೇಶ್, ಪಟ್ಟಣ ಪಂಚಾಯಿತಿ ಸದಸ್ಯ ನಟರಾಜು, ಕಾಂಗ್ರೆಸ್ ಯುವ ಅಧ್ಯಕ್ಷ ವಿನಯ್ಕುಮಾರ್, ಕ್ರೀಡಾಕೂಟದ ಆಯೋಜಕರಾದ ರಮೇಶ್, ರವಿಕುಮಾರ್, ಅರವಿಂದ್, ಮಧು, ಗೋಪಿನಾಥ್, ಪ್ರದೀಪ್ಕುಮಾರ್, ನಂದೀಶ್ ಇದ್ದರು.
ಕಾರ್ಯಕ್ರಮಕ್ಕೂ ಮುನ್ನಾ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಕೊರಟಗೆರೆ ಕ್ಷೇತ್ರದ ಅಕ್ಕಿರಾಂಪುರ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರು ಮತ್ತು ಮೂಲಸೌಲಭ್ಯಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿದರು.