ಹುಳಿಯಾರು: ಪಟ್ಟಣದಲ್ಲಿ ಹಾದು ಹೋಗುವ 150 ‘ಎ’ ಹೆದ್ದಾರಿಯ ಬೈಪಾಸ್ ಸರ್ವೆ ಮಂಗಳವಾರ ಪೊಲೀಸ್ ಬಿಗಿ ಭದ್ರತೆಯಲ್ಲಿ ಆರಂಭವಾಯಿತು.
ಪೋಚಕಟ್ಟೆ ಗ್ರಾಮದಿಂದ ಹುಳಿಯಾರು ಹೊರವಲಯದ ಎಸ್ಎಲ್ಆರ್ ಪೆಟ್ರೊಲ್ ಬಂಕ್ ಸಮೀಪ ಬೈಪಾಸ್ ಹಾದು ಹೋಗುತ್ತದೆ. ಹುಳಿಯಾರು ಬಸವೇಶ್ವರ ನಗರ, ಕಾಮಶೆಟ್ಟಿಪಾಳ್ಯ, ಕೆ.ಸಿ.ಪಾಳ್ಯ ಹಾಗೂ ಲಿಂಗಪ್ಪನ ಪಾಳ್ಯದ ರೈತರ ಜಮೀನು ಸ್ವಾಧೀನ ಮಾಡಿಕೊಳ್ಳಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಈಗಾಗಲೇ ಮೂರು ಬಾರಿ ಸರ್ವೆ ಕಾರ್ಯ ನಡೆದಿತ್ತು. ಆದರೆ ಕೆಲ ಗ್ರಾಮಗಳ ರೈತರು ಇದನ್ನು ವಿರೋಧಿಸಿದ್ದರು. ವಿರೋಧದ ನಡುವೆಯೂ ಮಂಗಳವಾರ ಪೋಚಕಟ್ಟೆ ಬಳಿಯಿಂದ ಸರ್ವೆ ಕಾರ್ಯ ಪೊಲೀಸರ ಬಿಗಿ ಪಹರೆಯಲ್ಲಿ ಆರಂಭವಾಯಿತು.
ಪಟ್ಟಣ ಸಮೀಪದ ಸರ್ವೆ ಮಾಡಲು ಬಂದಾಗ ರೈತರು ವಿರೋಧಿಸುವ ಮಾಹಿತಿ ತಿಳಿದು ಪೊಲೀಸರು ಬಿಗಿ ಪಹರೆ ಹಾಕಿದರು. ಡಿವೈಎಸ್ಪಿ ಕಲ್ಯಾಣ್ಕುಮಾರ್, ಸಿಪಿಐ ವೀಣಾ ಸೇರಿದಂತೆ ಹೆಚ್ಚಿನ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಹೆದ್ದಾರಿ ಪ್ರಾಧಿಕಾರದ ಸಹಾಯಕ ಎಂಜಿನಿಯರ್ ಕೃಷ್ಣನಾಯ್ಕ್ ಹಾಗೂ ಸರ್ವೆ ತಂಡದವರು ಇದ್ದರು.