ತುರುವೇಕೆರೆ: ಆಡಂಬರವಿಲ್ಲದೆ ಈ ಬಾರಿ ಪಟ್ಟಣದ ಸತ್ಯಗಣಪತಿ ಮೂರ್ತಿಯನ್ನು ಸೋಮವಾರ ತೆಪ್ಪೋತ್ಸವದ ಮೂಲಕ ಕೆರೆಯಲ್ಲಿ ವಿಸರ್ಜಿಸಲಾಯಿತು.
ಗಣೇಶ ಮೂರ್ತಿಯನ್ನು ಬೆಳಿಗ್ಗೆ ಭವ್ಯ ಮೆರವಣಿಗೆಯಲ್ಲಿ ಪಟ್ಟಣದ ತಿಪಟೂರು ರಸ್ತೆ ಮೂಲಕ ಸಂತೆ ಬಳಿ ಇರುವ ಕೆರೆಗೆ ನಾದಸ್ವರ ಹಾಗೂ ಮಂಗಳ ವಾದ್ಯದ ಮೂಲಕ ಕರೆತರಲಾಯಿತು.
ಸಮಿತಿಯ ಅಧ್ಯಕ್ಷ ಆರ್. ಮಲ್ಲಿಕಾರ್ಜುನ್, ಕಾರ್ಯದರ್ಶಿ ನಾಗರಾಜು, ಪದಾಧಿಕಾರಿಗಳಾದ ರಘು, ನರಸಿಂಹಯ್ಯ, ಚಂದ್ರಣ್ಣ, ಟಿ.ಎನ್. ಸತೀಶ್ ಸೇರಿದಂತೆ ಹಲವು ಮಂದಿ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಸಿಪಿಐ ನವೀನ್ ಮತ್ತು ಪಿಎಸ್ಐಗಳಾದ ಪ್ರೀತಮ್ ಮತ್ತು ಶಿವಲಿಂಗಯ್ಯ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ಈ ಬಾರಿ ಸಿಡಿಮದ್ದು ಅಬ್ಬರ ಇಲ್ಲದೇ ಗಣಪತಿಯನ್ನು ತೆಪ್ಪದಲ್ಲಿ ಸಾಗಿಸಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಅಪಾರ ಸಂಖ್ಯೆಯ ಭಕ್ತಾದಿಗಳು ಗಣಪತಿ ವಿಸರ್ಜನೆ ಯನ್ನು ನೋಡಿ ಕಣ್ತುಂಬಿಕೊಂಡರು.