ತಿಪಟೂರು: ರೈತ ಹೋರಾಟಗಾರ ಬೆನ್ನಾಯಕನಹಳ್ಳಿ ದೇವರಾಜು ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡುವ ಕೆಲಸವಾಗಬೇಕಿದೆ ಎಂದು ಪರಿಸರವಾದಿ ಸಿ.ಯತಿರಾಜು ಅಭಿಪ್ರಾಯಪಟ್ಟರು.
ನಗರದಲ್ಲಿ ರೈತಪರ ಹೋರಾಟಗಾರ ಬೆನ್ನಾಯಕನಹಳ್ಳಿ ದೇವರಾಜ್ ಅವರ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರ ಕಷ್ಟಗಳ ನಿವಾರಣೆಗಾಗಿ ಹುಟ್ಟಿಕೊಂಡ ರೈತ ಸಂಘ ಅನೇಕ ಮುಂಚೂಣಿ ಹೋರಾಟಗಾರರು, ನಾಯಕರನ್ನು ಕೊಟ್ಟಿದ್ದು, ಅವರ ವಿಚಾರಧಾರೆಗಳು ಒಂದು ತಲೆಮಾರಿಗೆ ಸೀಮಿತವಾಗದೆ ಎಲ್ಲರಿಗೂ ತಲುಪುವ ಕಾರ್ಯವಾಗಬೇಕಿದೆ ಎಂದರು.
ರೈತ ಹೋರಾಟಗಾರನ ಸಾವು ಕೇವಲ ದೈಹಿಕವಾಗಿಯೇ ಹೊರತು ಆತನ ವಿಚಾರಗಳಿಗೆ ಎಂದೂ ಸಾವಿರು ವುದಿಲ್ಲ. ಈ ನಿಟ್ಟಿನಲ್ಲಿ ಬೆನ್ನಾಯಕನಹಳ್ಳಿ ದೇವರಾಜು ಹೆಸರು ಶಾಶ್ವತವಾಗಿ ಉಳಿಯುವಂತ ಕಾರ್ಯವನ್ನು ಮಾಡುವ ಅಗತ್ಯವಿದೆ ಎಂದರು.
ಪರಿಸರ ಹೋರಾಟಗಾರ ಬಿ.ಎಲ್.ಜನಾರ್ದನ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದರಾಜು ಮಾತನಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ಬಿ.ಯೋಗೀಶ್ವರಸ್ವಾಮಿ, ಬಿ.ಉಮೇಶ್, ಸಿ.ಬಿ.ಶಶಿಧರ್, ದೇವರಾಜು, ಸಿದ್ಧಲಿಂಗಮೂರ್ತಿ, ಮನೋಹರ್ ಪಟೇಲ್, ಶ್ರೀಕಾಂತ್ ಇದ್ದರು.