ತುಮಕೂರು: ರಸ್ತೆ ಗುಂಡಿ ಮುಚ್ಚಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಪಟೂರು ನಗರದ 8 ವರ್ಷದ ಬಾಲಕಿ ಎನ್.ಧವನಿ ಮನವಿ ಮಾಡಿದ್ದು, ಉಳಿತಾಯದ ಹಣ ಕೊಡುವುದಾಗಿ ಹೇಳಿಕೊಂಡಿದ್ದಾರೆ.
ರಸ್ತೆಗಳ ಗುಂಡಿ ಮುಚ್ಚಿಸಿ, ಜನರ ಜೀವ ಉಳಿಸುವಂತೆ ಮನವಿ ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
‘ರಸ್ತೆಗಳ ಗುಂಡಿ ನೋಡಿದರೆ ಭಯವಾಗುತ್ತದೆ. ಹಲವರು ಬಿದ್ದು ಸತ್ತು ಹೋಗಿದ್ದಾರೆ. ಇಂತಹ ರಸ್ತೆಗಳಲ್ಲಿ ಅಪ್ಪ ಮನೆಗೆ ಹೇಗೆ ಬರುತ್ತಾರೆ ಎಂದು ಭಯ ವಾಗುತ್ತದೆ’ ಎಂದು ಬಾಲಕಿ ವಿಡಿಯೊದಲ್ಲಿ ಆತಂಕ ತೋಡಿಕೊಂಡಿದ್ದಾರೆ.
‘ನಿಮ್ಮ ಬಳಿ ಹಣ ಇಲ್ಲದಿದ್ದರೆ, ನಾನು ಕೊಡುತ್ತೇನೆ. ಚಾಕೋಲೆಟ್ಗೆ ಅಪ್ಪ ಕೊಟ್ಟಿದ್ದ ಹಣ ನನ್ನ ಬಳಿ ಇದೆ. ಅದನ್ನೇ ಕೊಡುತ್ತೇನೆ. ಮೊದಲು ಗುಂಡಿ ಮುಚ್ಚಿಸಿ, ಜನರ ಪ್ರಾಣ ಕಾಪಾಡಿ’ ಎಂದು ಕೇಳಿಕೊಂಡಿದ್ದಾರೆ.