ಪಾವಗಡ: ಪಟ್ಟಣದ ಎಸ್.ಎಸ್.ಕೆ ಕಾಲೇಜಿನ ಮುಂಭಾಗದ ಗುಡ್ಡದಲ್ಲಿ ಗಾಯಗೊಂಡು ನಿತ್ರಾಣವಾಗಿದ್ದ ಕರಡಿಗೆ ಮಂಗಳವಾರ ಅರಣ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡಿ ಸ್ಥಳಾಂತರಿಸಿದರು.
ಪಟ್ಟಣದ ಹೊರವಲಯದ ತುಮಕೂರು ರಸ್ತೆಯ ಪಕ್ಕದಲ್ಲಿ ಮಂಗಳವಾರ ಕರಡಿ ಕುಂಟುತ್ತಿರುವುದನ್ನು ಸಾರ್ವಜನಿಕರು ಗಮನಿಸಿದ್ದರು. ನಿತ್ರಾಣಗೊಂಡಿರುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ವೈದ್ಯರೊಂದಿಗೆ ಸ್ಥಳಕ್ಕೆ ಬಂದ ಸಿಬ್ಬಂದಿ ಕರಡಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಚಿಕಿತ್ಸೆ ನೀಡಿದರು. ನಂತರ ಕರಡಿಯನ್ನು ಬೋನಿನೊಳಗೆ ಹಾಕಿ ಸ್ಥಳಾಂತರಿಸಲಾಯಿತು.
ಸುಮಾರು 7ರಿಂದ 8 ವರ್ಷ ವಯಸ್ಸಿನ ಕರಡಿ ಕಾಲಿಗೆ ಗಾಯವಾಗಿದೆ. ಅಗತ್ಯ ಚಿಕಿತ್ಸೆ ನೀಡಲಾಗಿದೆ. ಸಂಪೂರ್ಣ ತಪಾಸಣೆ ನಂತರ ಎಷ್ಟು ಪ್ರಮಾಣದಲ್ಲಿ ಗಾಯವಾಗಿದೆ ಎಂಬುದು ತಿಳಿಯುತ್ತದೆ ಎಂದು ಸಿಬ್ಬಂದಿ ತಿಳಿಸಿದರು.
ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಾಯಗೊಂಡಿರಬಹುದು ಎಂದು ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದರು.
ವೈದ್ಯ ಮುರುಳಿ, ಸುರೇಶ್ ಚಿಕಿತ್ಸೆ ನೀಡಿದರು. ಎಸಿಎಫ್ ಶ್ರೀನಿವಾಸ್, ಸಹಾಯಕ ವಲಯ ಅರಣ್ಯಾಧಿಕಾರಿ ಬಸವರಾಜು, ಸಿಬ್ಬಂದಿ ಗಂಗರಾಜು, ಕೃಷ್ಣಪ್ಪ, ವೆಂಕಟೇಶ್, ಕೇಶವ, ಧನಂಜಯ, ಸಿದ್ದಪ್ಪ ಇದ್ದರು.