ತುಮಕೂರು: ಕೊರೊನಾ ಶಂಕಿತರ ಗಂಟಲು ಸ್ರಾವ ಮತ್ತು ಕಫದ ಮಾದರಿಗಳ ಪರೀಕ್ಷೆ ಇನ್ನು ಮುಂದೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿಯೇ ನಡೆಯಲಿದೆ.
ಈ ಹಿಂದೆ ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರು ಮತ್ತು ಹಾಸನಕ್ಕೆ ಕಳುಹಿಸಬೇಕಿತ್ತು.ಆರ್ಟಿಪಿಸಿಆರ್ ಲ್ಯಾಬ್ ಇಲ್ಲಿಯೇ ಆರಂಭವಾಗಿರುವ ಕಾರಣ ಸೋಂಕು ಪತ್ತೆಗೆ ವೇಗ ದೊರೆಯಲಿದೆ. ವರದಿಗಳು ಬರುವುದು ತಡವಾದ ಕಾರಣ ಶಂಕಿತರ ಬಗ್ಗೆ ಭಯ ಸಹ ಹೆಚ್ಚುತ್ತಿತ್ತು.
ಈ ಪರೀಕ್ಷಾ ಕೇಂದ್ರದಲ್ಲಿ ನಿತ್ಯ 280 ಮಾದರಿಗಳನ್ನು ತಪಾಸಣೆಗೆ ಒಳಪಡಿಸಬಹುದು. ಇದಕ್ಕಾಗಿ ಐದು ಮಂದಿ ಸಿಬ್ಬಂದಿಗೆ ತರಬೇತಿ ಸಹ ಕೊಡಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಶುಕ್ರವಾರ ಲ್ಯಾಬ್ ಉದ್ಘಾಟಿಸಿದರು.
ಚಿಕೂನ್ಗುನ್ಯ, ಎಚ್1ಎನ್1, ಡೆಂಗಿ ಸೇರಿದಂತೆ ವೈರಸ್ಗೆ ಸಂಬಂಧಿಸಿದ ರೋಗಗಳನ್ನು ಇಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ತಿಳಿಸಿದ್ದಾರೆ.