ಕುಣಿಗಲ್ (ತುಮಕೂರು ಜಿಲ್ಲೆ): ಪಟ್ಟಣದಲ್ಲಿ ಬುಧವಾರ ಬಿಜೆಪಿ ಹಮ್ಮಿಕೊಂಡಿರುವ ಜನಸಂಕಲ್ಪ ಯಾತ್ರೆಗೂ ಮುನ್ನವೇ ಪಕ್ಷದಲ್ಲಿನ ಭಿನ್ನಮತ ಸ್ಫೋಟಿಸಿದೆ. ಬ್ಯಾನರ್ ಕಟ್ಟುವ ಕುರಿತು ಪಕ್ಷದ ಎರಡು ಗುಂಪುಗಳು ಕಿತ್ತಾಡಿಕೊಂಡವು.
ಸಮಾವೇಶದ ಬ್ಯಾನರ್ ಕಟ್ಟುವ ವಿಚಾರವಾಗಿ ಸ್ಥಳೀಯ ಮುಖಂಡರಾದ ರಾಜೇಶ್ಗೌಡ ಹಾಗೂ ಡಿ.ಕೃಷ್ಣಕುಮಾರ್ ಅವರ ಬೆಂಬಲಿಗರು ಮಂಗಳವಾರ ರಸ್ತೆಯಲ್ಲಿಯೇ ಪರಸ್ಪರ ನಿಂದಿಸಿ, ತಳ್ಳಾಡಿಕೊಂಡರು.
ತುಮಕೂರು ರಸ್ತೆಯ ದೊಡ್ಡಕೆರೆ ಏರಿ ಬಳಿ ರಾಜೇಶ್ಗೌಡ ಅವರ ಬೆಂಬಲಿಗರು‘ಜನಸಂಕಲ್ಪ’ ಯಾತ್ರೆ ಮತ್ತು ಪಕ್ಷದ ನಾಯಕರಿಗೆ ಸ್ವಾಗತ ಕೋರುವ ಬ್ಯಾನರ್ ಕಟ್ಟುತ್ತಿದ್ದರು. ಇದನ್ನು ಗಮನಿಸಿದ ಕೃಷ್ಣಕುಮಾರ್ ಬೆಂಬಲಿಗರು ಅದನ್ನು ತಡೆದಿದ್ದಾರೆ.
‘ಹಲವು ವರ್ಷಗಳಿಂದ ಪಕ್ಷ ಸಂಘಟಿಸಿಕೊಂಡು ಬಂದಿದ್ದೇವೆ. ಕಾರ್ಯಕ್ರಮದ ಎಲ್ಲವನ್ನೂ ಕೃಷ್ಣಕುಮಾರ್ ನೋಡಿಕೊಂಡಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರನ್ನು ನಾವು ಕರೆಸುತ್ತಿದ್ದೇವೆ. ನೀವೇಕೆ ಬ್ಯಾನರ್ ಕಟ್ಟುತ್ತಿದ್ದೀರಿ’ ಎಂದು ತಗಾದೆ ತೆಗೆದರು.
ಇದಕ್ಕೆ ರಾಜೇಶ್ಗೌಡ ಬೆಂಬಲಿಗರು ಪ್ರತಿರೋಧ ಒಡ್ಡಿದರು. ಒಂದು ಗುಂಪು ಬ್ಯಾನರ್ ಕಿತ್ತು ಎಸೆಯಿತು. ಕೈ, ಕೈ ಮಿಲಾಯಿಸಿದ ಉಭಯ ಬಣಗಳ ಸದಸ್ಯರು ಮತ್ತಷ್ಟು ಬೆಂಬಲಿಗರನ್ನು ಸ್ಥಳಕ್ಕೆ ಕರೆಸಿಕೊಂಡರು. ಸ್ಥಳಕ್ಕೆ ಬಂದ ಪೊಲೀಸರು ಲಾಠಿ ಬೀಸಿ ಎಲ್ಲರನ್ನೂ ಚದುರಿಸಿದರು.