ಶಿರಾ: ಕ್ಷೇತ್ರದೆಲ್ಲೆಡೆ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರ ಪರ ಅಲೆಯಿದ್ದು ಸುಮಾರು 30 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ಖಚಿತ ಎಂದು ಶಾಸಕ ಬಿ.ಝೆಡ್. ಜಮೀರ್ ಅಹಮದ್ ಖಾನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ತಾಲ್ಲೂಕಿಗೆ ಹೇಮಾವತಿ ನೀರು ಬರಲು ಜಯಚಂದ್ರ ಅವರು ಕಾರಣ. 20 ಸಾವಿರ ಮನೆ ನಿರ್ಮಾಣ ಮಾಡುವ ಮೂಲಕ ಬಡವರಿಗೆ ಸೂರು ಒದಗಿಸಿದ್ದಾರೆ. ಜಿಲ್ಲಾಮಟ್ಟದ ಎಲ್ಲ ಸೌಲಭ್ಯ ದೊರೆಯುವಂತೆ ಮಾಡುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ರೂಪಿಸಿದ್ದಾರೆ. ಇದನ್ನು ಗಮನಿಸಿ ಈ ಬಾರಿ ಮತದಾರರು ಜಯಚಂದ್ರ ಅವರನ್ನು ಗೆಲ್ಲಿಸಲಿದ್ದಾರೆ ಎಂದರು.
ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಧ್ಯೆ ಸ್ಪರ್ಧೆ ಇದೆ. ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾದ ಸ್ಥಿತಿ ಇದೆ. ಕೆಆರ್ ಪೇಟೆ ಮಾದರಿಯಲ್ಲಿ ಚುನಾವಣೆ ಮಾಡುವುದಾಗಿ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆದರೆ ಕೆಆರ್ ಪೇಟೆಯಲ್ಲಿ ಬಿಜೆಪಿ ಮುಖನೋಡಿ ಯಾರು ಮತ ಹಾಕಿಲ್ಲ. ನಾರಾಯಣಗೌಡ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ ನೀಡಿದ್ದಾರೆ. ಇಲ್ಲಿ ಅಂತಹ ಪರಿಸ್ಥಿತಿ ಇಲ್ಲ. ವಿಜಯೇಂದ್ರ ಅವರ ಆಟ ನಡೆಯುವುದಿಲ್ಲ ಎಂದರು.