ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದಾರೆ. ಮತ ಚಲಾಯಿಸುವ ಮೂಲಕ ಸಂವಿಧಾನಾತ್ಮಕ ಹಕ್ಕನ್ನು ಪ್ರತಿಪಾದಿಸಬೇಕು ಎಂದು ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ತಿಳಿಸಿದರು.
ವರದಕ್ಷಿಣೆ ವಿರೋಧಿ ವೇದಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ನಿರ್ಭಯ ಮಹಿಳಾ ಜಾಗೃತಿ ವೇದಿಕೆ ಸಹಯೋಗದಲ್ಲಿ ‘ನಿಮ್ಮ ಮತ ದೇಶದ ಹಿತ’ ಎಂಬ ಘೋಷಣೆಯೊಂದಿಗೆ ಮತದಾನ ಜಾಗೃತಿಯ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕು. ಪವಿತ್ರ ಕರ್ತವ್ಯ. ಒಂದೊಂದು ಮತವೂ ಪವಿತ್ರವಾಗಿರುವುದರಿಂದ ಅದನ್ನು ಚಲಾಯಿಸಿ ಸಂಭ್ರಮಿಸಬೇಕು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ಜನರಿಗೆ ಸಂವಿಧಾನ ಗೊತ್ತಿಲ್ಲ. ಅನಕ್ಷರಸ್ಥರು ತಮ್ಮ ಹಕ್ಕು ಚಲಾಯಿಸುತ್ತಾರೆ. ಆದರೆ ವಿದ್ಯಾವಂತ ಜನರು ಎಲ್ಲ ಮಾಹಿತಿ ತಿಳಿದಿದ್ದರೂ ಹಕ್ಕು ಮತ್ತು ಕರ್ತವ್ಯ ಚಲಾಯಿಸುವಲ್ಲಿ ಹಿಂದೆ ಬೀಳುತ್ತಾರೆ. ಪ್ರಜಾಪ್ರಭುತ್ವದಲ್ಲಿ ಮತದಾನ ವಿಶೇಷ ಹಕ್ಕಾಗಿದೆ. ಈ ಪರಿಪೂರ್ಣ ಹಕ್ಕನ್ನು ಎಲ್ಲರೂ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ನಗರದ ಸೋಮೇಶ್ವರಪುರಂ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ವಿವಿಧ ಜನನಿಬಿಡ ಪ್ರದೇಶಗಳನ್ನು ಕಡ್ಡಾಯವಾಗಿ ಮತ ಚಲಾಯಿಸುವ ಕರಪತ್ರಗಳನ್ನು ವಿತರಿಸಲಾಯಿತು. ಸಾ.ಚಿ.ರಾಜಕುಮಾರ, ಸಿ.ಎಲ್.ಸುನಂದಮ್ಮ, ಲಲಿತಾ ಮಲ್ಲಪ್ಪ, ಮಮತಾ ರವಿಕುಮಾರ್, ಗೀತಾ ನಾಗೇಶ್. ಪಾರ್ವತಮ್ಮ, ಅಂಬುಜಾಕ್ಷಿ ಇದ್ದರು.