ತುಮಕೂರು: ನಾಡಿನ ಪ್ರವಾಸಿ ಕ್ಷೇತ್ರಗಳಲ್ಲೊಂದಾದ ಇಲ್ಲಿನ ಸಿದ್ಧಗಂಗಾಮಠದಲ್ಲೂ ಈ ವರ್ಷ ಪ್ರತಿ ವರ್ಷಕ್ಕಿಂತ ನೀರಿನ ಬರಹೆಚ್ಚಾಗಿದೆ.
ಆದರೆ, ಮಠದ ಪಕ್ಕ ಇರುವ ಸಿದ್ಧಲಿಂಗೇಶ್ವರ ದೇವಸ್ಥಾನ ಇರುವ ಬೆಟ್ಟದಲ್ಲಿರುವ ಕೋತಿ, ಪಕ್ಷಿ ಪ್ರಾಣಿಗಳಿಗೆ ನೀರಿನ ಅಭಾವ ಆಗದ ರೀತಿ ಮಠದ ಆಡಳಿತ ಮಂಡಳಿಯು ಮಠದ ಆವರಣದಲ್ಲಿರುವ ಕಲ್ಯಾಣಿ, ಹೊಂಡಗಳಿಗೆ ನೀರು ತುಂಬಿಸಿದೆ.
ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆಯೇ ನೂರಾರು ಕೋತಿಗಳು ಇವುಗಳಿ ಜಿಗಿದು ಗಂಟೆಗಟ್ಟಲೆ ಕಲ್ಯಾಣಿ, ಹೊಂಡದಲ್ಲಿ ಈಜುತ್ತ ನೀರಾಟ, ಕಚ್ಚಾಟ, ಚೇಷ್ಟೆಗಳಲ್ಲಿಯೇ ಕಾಲ ಕಳೆಯುತ್ತಿವೆ. ಈ ಕೋತಿಗಳನ್ನು ಕಂಡ ಜನರು ಖುಷಿ ಪಡುತ್ತಿದ್ದಾರೆ. ಮೊಬೈಲ್ ಕ್ಯಾಮರಾಗಳಲ್ಲಿ ಸೆರೆ ಹಿಡಿಯುವುದು ಭಾನುವಾರ ಕಂಡು ಬಂದಿತು.
ನೀರಲ್ಲಿ ಮುಳುಗುವುದು, ಮೇಲಿನಿಂದ ಜಿಗಿಯುವುದು, ಒಂದು ಕೋತಿ ಮೇಲೆ ಹತ್ತಲು ಹೋದರೆ ಇನ್ನೊಂದು ಕೋತಿ ಅದರ ಬಾಲ ಹಿಡಿದು ಕೆಳಗೆ ಬೀಳಿಸುವುದು ಹೀಗೆ ಹತ್ತಾರು ದೃಶ್ಯಗಳು ಕಂಡು ಬರುತ್ತಿವೆ.