ಕುಣಿಗಲ್: ‘ತಾಲ್ಲೂಕಿನ ಮಾರ್ಕೋನ ಹಳ್ಳಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರಾಗಿ ಬೆಳೆಗೆ ಇದೇ 21ರಿಂದ ನಾಲ್ಕು ಹಂತದಲ್ಲಿ ನೀರು ಹರಿಸಲಾಗುವುದು’ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು.
ರಾಗಿ ಬೆಳೆಗೆ ನೀರು ಹರಿಸುವ ಸಲುವಾಗಿ ಮಾರ್ಕೋನಹಳ್ಳಿ ಜಲಾಶಯದ ಬಳಿ ಗುರುವಾರ ನಡೆದ ರೈತರ ಸಭೆಯಲ್ಲಿ ಮಾತನಾಡಿದರು.
ತಾಲ್ಲೂಕಿನ ರೈತರಿಗೆ ಸಕಾಲದಲ್ಲಿ ನೀರು ಕೊಡಬೇಕಾದರೆ, ಹೇಮಾವತಿ ನೀರು ಜಿಲ್ಲೆಯ ಭಾಗಕ್ಕೆ ಹರಿಯುವ ಪ್ರಾರಂಭದ ದಿನಗಳಲ್ಲೇ ಹೋರಾಟ ಮಾಡಬೇಕಿದೆ. ರೈತರ ಸಹಕಾರ ಸಹ ಅಗತ್ಯವಾಗಿದೆ. ರೈತರು ನೀರನ್ನು ಸಕಾಲದಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದರು.
ಕಾರ್ಯಪಾಲಕ ಎಂಜಿನಿಯರ್ ಮಂಜೇಶ್ಗೌಡ ಮಾತನಾಡಿ, ಜಲಾಶಯದಲ್ಲಿ 1.8 ಟಿಎಂಸಿ ಅಡಿ ನೀರಿದೆ. ನೀರಿನ ಸಂಗ್ರಹಣೆ ಪರಿಶೀಲಿಸಿ ಮಳೆ ಆಗದಿದ್ದರೆ 21ರಿಂದ, ಮಳೆ ಬಂದರೆ 28ರಿಂದ ನೀರು ಹರಿಸಲಾಗುವುದು ಎಂದರು.
ಅಚ್ಚಕಟ್ಟು ಪ್ರದೇಶದ ರೈತರು, ತಾಲ್ಲೂಕಿನ ಪಾಲಿನ ನೀರನ್ನು ಪಡೆಯಲು ಶಾಸಕರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.
ಉಪವಿಭಾಗಾಧಿಕಾರಿ ಅಜೇಯ್, ಹೇಮಾವತಿ ನಾಲಾ ವಲಯದ ಎಂಜಿನಿಯರ್ ಉಮಾಮಹೇಶ್, ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ, ಪಿಎಸ್ಐ ಮಂಜು ಇದ್ದರು.