ತುಮಕೂರು: ‘ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಸರ್ಕಾರಿ ನೌಕರರಿಗೆ ಜೇಷ್ಠತೆ ವಿಸ್ತರಿಸುವ ರಾಜ್ಯ ಸರ್ಕಾರದ ನೂತನ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವುದು ಸ್ವಾಗತಾರ್ಹ’ ಎಂದು ಉಪಮುಖ್ಯಮಂತ್ರಿ ಹಾಗೂ ಕಾನೂನು ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಬಿ.ಕೆ. ಪವಿತ್ರ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ಕುರಿತ ತೀರ್ಪನ್ನು ನ್ಯಾಯಮೂರ್ತಿಗಳು ಪ್ರಕಟಿಸಿದ್ದಾರೆ’ ಎಂದರು.
‘ಇನ್ನು ಮುಂದೆ ಸರ್ಕಾರವು ಹಿಂದೆ ಯಾರ್ಯಾರಿಗೆ ಹಿಂಬಡ್ತಿಯಾಗಿತ್ತೊ ಅವರಿಗೆ ಮತ್ತೆ ಅವರವರ ಹುದ್ದೆಗಳನ್ನು ಕೊಡಬೇಕಾಗುತ್ತೆ. ಇದು ಮುಂಬಡ್ತಿ ಎಂಬುದಕ್ಕಿಂತ ಮೊದಲಿದ್ದ ಹುದ್ದೆಗಳನ್ನು ಅವರವರಿಗೆ ಕೊಡುವುದಾಗಿದೆ’ ಎಂದು ಹೇಳಿದರು.
‘ಈಗ ತಾನೇ ತೀರ್ಪು ಬಂದಿದೆ. ನಾನೇ ಕಾನೂನು ಸಚಿವ. ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಅಂತಿಮವಾಗಿ ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚಿಸಿ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ’ ಎಂದು ತಿಳಿಸಿದರು.