ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶಕ್ಕೆ ಉಸಿರು ಬಿಗಿ ಹಿಡಿದ ನಾಯಕರು; ಕಲ್ಪತರು ನಾಡಿನ ಕಿರೀಟ ಯಾರಿಗೆ?

ದೇಶದ ಚಿತ್ತ ತುಮಕೂರು ಲೋಕಸಭಾ ಕ್ಷೇತ್ರದತ್ತ
Last Updated 22 ಮೇ 2019, 15:29 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಅತ್ಯಂತ ಪ್ರತಿಷ್ಠಿತ ಕಣ, ಕುತೂಹಲ ಸೃಷ್ಟಿಸಿರುವ ಕ್ಷೇತ್ರಗಳಲ್ಲಿ ತುಮಕೂರು ಲೋಕಸಭಾ ಕ್ಷೇತ್ರವೂ ಒಂದು. ಈವರೆಗೆ ನಡೆದ ಚುನಾವಣೆಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಈ ಕ್ಷೇತ್ರ ಪ್ರತಿಷ್ಠಿತ ಕಣವಾಗಿದೆ.

ಜೆಡಿಎಸ್ ವರಿಷ್ಠರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೇ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ. ದೇವೇಗೌಡರು ಈ ಕ್ಷೇತ್ರದ ಗೆಲವು ಮತ್ತು ಸೋಲು ಕೇವಲ ತುಮಕೂರು ಕ್ಷೇತ್ರಕ್ಕೆ ಮಾತ್ರವಲ್ಲ. ಇಡೀ ದೇಶದ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ.

ಹೀಗಾಗಿಯೇ ಇಡೀ ದೇಶವೇ ತುಮಕೂರು ಕ್ಷೇತ್ರದತ್ತ ಕಣ್ಣು ನೆಟ್ಟಿವೆ. ಗೌಡರು ಗೆದ್ದರೆ ತೃತೀಯ ರಂಗಕ್ಕೆ ಆನೆ ಬಲ ಬರಲಿದೆ. ದೇಶದ ರಾಜಕೀಯದ ಚಿತ್ರಣದ ಮೇಲೆ ಏನಾದರೂ ಬೆಳವಣಿಗೆಗಳು ನಡೆಯಬಹುದು ಎಂದು ಜೆಡಿಎಸ್ ಮುಖಂಡರು ಗೌಡರ ರಾಜಕೀಯ ಶಕ್ತಿಯನ್ನು ವಿವರಿಸುತ್ತಾರೆ.

ಬಿಜೆಪಿಯ ಅಭ್ಯರ್ಥಿ ಜಿ.ಎಸ್.ಬಸವರಾಜ್ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದವರಾಗಿದ್ದು, ಕ್ಷೇತ್ರದ ಮತದಾರರ ಚಿತ್ತ ಅರಿತವರು. ಅವರು ಈ ಕ್ಷೇತ್ರದಲ್ಲಿ ಗೆಲ್ಲುವುದು ಬಿಜೆಪಿಗೆ ಅಷ್ಟೇ ಮಹತ್ವದ್ದಾಗಿದೆ. ಬಸವರಾಜ್ ಅವರು ಗೌಡರನ್ನು ಪರಾಭವಗೊಳಿಸಿದರೆ ರಾಜ್ಯ ಮಟ್ಟದಲ್ಲಷ್ಟೇ ಅಲ್ಲ. ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಗೌರವ ಪ್ರಾಪ್ತಿಯಾಗಲಿದೆ. ಅವರ ಗೆಲುವು ಖಚಿತ ಎಂದು ಬಿಜೆಪಿ ಮುಖಂಡರು ಮತ ಎಣಿಕೆ ಮುನ್ನಾ ದಿನ ಭರವಸೆ ವ್ಯಕ್ತಪಡಿಸಿದರು.

ದೇವೇಗೌಡರನ್ನು ಕ್ಷೇತ್ರಕ್ಕೆ ಆಹ್ವಾನಿಸಿ ಅವರ ಪ್ರಚಾರಕ್ಕೆ ಹಗಲಿರುಳು ಶ್ರಮಿಸಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಸಚಿವ ಎಸ್.ಆರ್. ಶ್ರೀನಿವಾಸ್ ಅವರಿಗೂ ಗುರುವಾರ ಮಧ್ಯಾಹ್ನದ ಷ್ಟೊತ್ತಿಗೆ ಹೊರಬೀಳುವ ಫಲಿತಾಂಶ ಅಷ್ಟೇ ಮಹತ್ವದ್ದಾಗಿದೆ.

ದೊಡ್ಡಗೌಡರು ಗೆದ್ದರೆ ಮೈತ್ರಿ ಸರ್ಕಾರದಲ್ಲಿ ಇಬ್ಬರೂ ಮುಖಂಡರಿಗೆ ದೊಡ್ಡ ಗೌರವ, ಮೈಲೇಜ್. ಪರಾಭವಗೊಂಡರೆ ಅದರ ಪರಿಣಾಮಗಳನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಈ ಮುಖಂಡರ ಸಾಮರ್ಥ್ಯ, ಪ್ರತಿಷ್ಠೆಯನ್ನೇ ಪ್ರಶ್ನಿಸುವಂತಾಗುತ್ತದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT