ಹೊಲದ ಅಚ್ಚು ಪೂಜೆ ಆಚರಿಸಿ ವಿವರ ನೀಡಿದ ಹುತ್ರಿದುರ್ಗ ಹೋಬಳಿಯ ಪುಟ್ಟಯ್ಯನಪಾಳ್ಯದ ರವಿಕುಮಾರ್– ಚಂದ್ರಿಕಾ ದಂಪತಿ, ‘ಎರಡು ಎಕರೆ ಜಮೀನಿನಲ್ಲಿ ರಾಗಿ ಸಂವೃದ್ಧಿಯಾಗಿ ಬೆಳೆದಿದೆ. ಕಟಾವಿಗೆ ಮುನ್ನಾ ದಿನ ಸಂಜೆ ಕೆಲ ರಾಗಿ ಪೈರುಗಳನ್ನು ಹೊಲದ ಮುಂಭಾಗದಲ್ಲಿ ಹರಡಿ, ತ್ರಿಮೂರ್ತಿ ಸ್ವರೂಪದ ಮೂರು ಕಲ್ಲುಗಳನ್ನು ಪ್ರತಿಷ್ಠಾಪಿಸಿ, ಕುಡುಗೋಲು ಮತ್ತಿತರ ಸಾಮಗ್ರಿಗಳನ್ನಿಟ್ಟು ಉತ್ತರಾಣಿ, ಅಣ್ಣೆ ಮತ್ತು ಹುಚ್ಚೇಳು ಹೂವುಗಳಿಂದ ಅಲಂಕರಿಸುತ್ತೇವೆ. ಮೊಸರನ್ನ ನೈವೇಧ್ಯ ಮಾಡಿ, ಭೂಮಿತಾಯಿಗೆ ಧನ್ಯವಾದ ಅರ್ಪಿಸಿ ನಂತರ ಬೆಳೆ ಕಟಾವು ಮಾಡುತ್ತೇವೆ’ ಎಂದು ತಿಳಿಸಿದರು.