ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಸೋಪನಹಳ್ಳಿ ಗ್ರಾಮದದೇವಿಕಾ (17) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೇವಿಕಾ ತುಮಕೂರಿನ ಸಿದ್ದಗಂಗಾ ಕಾಲೇಜಿನ ದ್ವಿತೀಯ ಪಿಯುಸಿ ಓದುತ್ತಿದ್ದರು. ಸದ್ಯ ಕಾಲೇಜಿಗೆ ರಜೆ ಇರುವುದರಿಂದ ಮನೆಯಲ್ಲಿ ಇದ್ದರು.
ಗ್ರಾಮದಲ್ಲಿ ತಂದೆ ಹಾಗೂ ದಾಯಾದಿಗಳ ನಡುವೆ ಜಮೀನು ವಿಚಾರವಾಗಿ ಕೆಲ ದಿನಗಳಿಂದ ಗಲಾಟೆ ನಡೆದಿತ್ತು. ಈ ಬಗ್ಗೆ ದೇವಿಕಾಳ ಪೋಷಕರು ಪಟ್ಟಣದ ಠಾಣೆಗೆ ದೂರು ನೀಡಲು ತೆರಳಿದ್ದ ವೇಳೆ ದೇವಿಕಾ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪಟ್ಟಣದ ಪೊಲೀಸರು ತಿಳಿಸಿದರು.
ಜಮೀನು ಗಲಾಟೆ ವಿಷಯವಾಗಿ ಪೊಲೀಸರಿಗೆ ದೂರು ನೀಡಿದ್ದರೂ, ಕ್ರಮ ಕೈಗೊಂಡಿಲ್ಲ. ಪೊಲೀಸರು ಸಕಾಲಕ್ಕೆ ಗಲಾಟೆ ಇತ್ಯರ್ಥ ಮಾಡಿದ್ದರೆ, ಮಗಳು ಹೀಗೆ ಸಾಯುತ್ತಿರಲಿಲ್ಲ ಎಂದು ದೇವಿಕಾ ಪೋಷಕರು ಆರೋಪಿಸಿದ್ದಾರೆ.
ಪ್ರಕರಣ ಸಂಬಂಧ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.