ಚಿಕ್ಕನಾಯಕನಹಳ್ಳಿ: ನಗರದ ಹಳೆ ಊರಿನ ಕೊಳಚೆ ಪ್ರದೇಶದಲ್ಲಿ ಆರೋಗ್ಯ ಕೇಂದ್ರ ಘಟಕ ಆರಂಭಿಸಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ರುದ್ರನಗುಡಿಯಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಆರೋಗ್ಯ ಕೇಂದ್ರ ಘಟಕ ಸ್ಥಾಪನೆಗಾಗಿ ಸಾರ್ವಜನಿಕರು ನೀಡಿದ ಮನವಿ ಸ್ವೀಕರಿಸಿ ಮಾತನಾಡಿ, ಈ ಭಾಗದ ಜನರ ಬೇಡಿಕೆಯಂತೆ ಎನ್ಆರ್ಎಚ್ಎಂ ಯೋಜನೆಯಡಿ ಆರೋಗ್ಯ ಕೇಂದ್ರ ಆರಂಭಿಸಲು ಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಜತೆ ಮಾತನಾಡಲಾಗಿದೆ. ಆರೋಗ್ಯ ಕೇಂದ್ರಕ್ಕಾಗಿ ಪುರಸಭೆಗೆ ಸೇರಿದ ಕಸಬಾ ಚಾವಡಿಯ ಹಳೆ ಕಟ್ಟಡ ತೆರವುಗೊಳಿಸಲು ಸೂಚಿಸಲಾಗಿದ್ದು, ಎರಡು ದಿನದಲ್ಲಿ ಈ ಕಾರ್ಯ ನೆರವೇರಲಿದೆ ಎಂದರು. ಇದಕ್ಕಾಗಿ ಶಾಸಕರ ನಿಧಿಯಿಂದ ರೂ.2ಲಕ್ಷ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದರು.
ಸಭೆಯಲ್ಲಿ ಪುರಸಭಾ ಅಧ್ಯಕ್ಷ ದೊರೆಮುದ್ದಯ್ಯ ಮಾತನಾಡಿದರು. ಆರೋಗ್ಯ ಸಮಿತಿ ಸದಸ್ಯ ಎನ್.ಪುಟ್ಟಣ್ಣ, ಪುರಸಭಾ ಮಾಜಿ ಅಧ್ಯಕ್ಷರಾದ ಚಂದ್ರಶೇಖರಗುಪ್ತ, ಮುಖಂಡರಾದ ಟಿ. ರಾಮಯ್ಯ, ಚಂದ್ರಶೇಖರ ಶ್ರೇಷ್ಠಿ, ಆಟೊ ಚಾಲಕರ ಸಂಘದ ರಾಜಶೇಖರ್, ವಿಶ್ವಕರ್ಮ ಸಮಾಜದ ಮುಖಂಡ ವೇಣುಗೋಪಾಲ್, ಗಂಗಾಧರ್ ಇದ್ದರು.ಸಿ.ಮಲ್ಲಿಕಾರ್ಜುನಸ್ವಾಮಿ ಸ್ವಾಗತಿಸಿದರು.