ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಸೊಂಡೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಈಚೆಗೆ ನಿರ್ಮಿಸಿದ್ದ ತಡೆಅಣೆಯ ಏರಿ ಕುಸಿದಿದ್ದು, ಗುತ್ತಿಗೆದಾರರೇ ಏರಿ ಬದಿಯಲ್ಲಿ ಕಂದಕ ತೋಡಿ ನೀರು ಹೊರಗೆ ಬಿಟ್ಟಿದ್ದಾರೆ ಎಂದು ಗ್ರಾಮಸ್ಥರು ಮಂಗಳವಾರ ದೂರಿದರು.
ಕಳಪೆ ಗುಣಮಟ್ಟದ ಸಾಮಗ್ರಿ ಬಳಸಿರುವ ಕುರಿತು ಶಂಕೆ ವ್ಯಕ್ತಪಡಿಸಿರುವ ಗ್ರಾಮಸ್ಥರು, ಕಾಮಗಾರಿಯ ಗುಣಮಟ್ಟ ಕಾಪಾಡುವಲ್ಲಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಗುಡ್ಡದ ಸರಣಿಯಲ್ಲಿ ಬಿದ್ದ ಮಳೆ ನೀರು ಗುಡ್ಡಗಳ ಮೇಲಿಂದ ಹರಿದು ಬಂದು ಸ್ವಾಭಾವಿಕವಾಗಿ ಸಂಗ್ರಹವಾಗುತ್ತಿತ್ತು. ಕಾಡುಪ್ರಾಣಿಗಳು, ಜಾನುವಾರುಗಳು ತಮ್ಮ ದಾಹ ಇಂಗಿಸಿಕೊಳ್ಳುತ್ತಿದ್ದವು. ತಡೆಅಣೆ ನಿರ್ಮಿಸುವ ನೆಪದಲ್ಲಿ ಸ್ವಾಭಾವಿಕ ವ್ಯವಸ್ಥೆಯನ್ನೂ ಹಾಳುಗೆಡವಿದ್ದಾರೆ ಎಂದು ರೈತ ಸುಧಾಕರ್ ಆರೋಪಿಸಿದರು.
ಸೊಂಡೇನಹಳ್ಳಿ ಹಳ್ಳದಲ್ಲಿ ಒಟ್ಟು 12 ತಡೆಅಣೆಗಳು ಕಳಪೆ ಕಾಮಗಾರಿಯಿಂದ ಕೊಚ್ಚಿ ಹೋಗಿವೆ ಎಂದು ದೂರಿದ ಸೋಮನಹಳ್ಳಿ, ಸೋಮನಹಳ್ಳಿ ಪಾಳ್ಯ, ಬಾಣದೇವರಹಟ್ಟಿ, ಜುಂಜಪ್ಪನಹಟ್ಟಿ, ರಂಗನಾಥಪುರ, ನಾರ್ಸಿಹಳ್ಳಿ ಗ್ರಾಮಸ್ಥರು ಚೆಕ್ ಡ್ಯಾಂ ನಿರ್ಮಿಸುವ ನೆಪದಲ್ಲಿ ಸ್ವಾಭಾವಿಕ ವ್ಯವಸ್ಥೆಯನ್ನು ಹಾಳು ಮಾಡಲಾಗಿದೆ ಎಂದು ರೈತರಾದ ಬಸವರಾಜು, ರಾಜು, ಚಿಕ್ಕಣ್ಣಸ್ವಾಮಿ, ಕೆಂಪಯ್ಯ ದೂರಿದರು. ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎ.ತಿಮ್ಮೇಗೌಡ, ಗೋ.ನಿ.ವಸಂತಕುಮಾರ್ ಉಪಸ್ಥಿತರಿದ್ದರು.