ತುರುವೇಕೆರೆ: ಅಮ್ಮಸಂದ್ರ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಬೆಸ್ಕಾಂನಿಂದ ಎಕ್ಸ್ಪ್ರೆಸ್ ವಿದ್ಯುತ್ ಸಂಪರ್ಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕುಡಿಯುವ ನೀರಿನ ಪೂರೈಕೆ ಗ್ರಾಮ ಪಂಚಾಯಿತಿಗೆ ದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿತ್ತು. ಅಮ್ಮಸಂದ್ರ ಪಟ್ಟಣದ ಜನಸಂಖ್ಯೆ 5ಸಾವಿರ ಆಗಿದ್ದು, ನಿತ್ಯ 2 ಲಕ್ಷ ಲೀಟರ್ ನೀರಿನ ಬೇಡಿಕೆ ಇತ್ತು. ಕುಡಿಯುವ ನೀರಿನ ಸರಬರಾಜು ಮಾಡಲು 35 ಸಿಸ್ಟನ್, 1 ಓವರ್ಹೆಡ್ ಟ್ಯಾಂಕ್, 10 ಸಾವಿರ ಗ್ಯಾಲನ್ ಸಾಮರ್ಥ್ಯವುಳ್ಳ ನೆಲದೊಳಗಿನ ನೀರು ಸಂಗ್ರಹ ವ್ಯವಸ್ಥೆ, ಇವುಗಳಿಗೆ ನೀರು ಪೂರೈಸಲು 8 ಕೊಳವೆ ಬಾವಿಗಳು ಇದ್ದರೂ; ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಜನಪ್ರತಿನಿಧಿಗಳು ಬಸವಳಿದು ಹೋಗಿದ್ದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಜ್, ಉಪಾಧ್ಯಕ್ಷ ಲೋಕೇಶ್, ಮಾಜಿ ಅಧ್ಯಕ್ಷ ಸಿದ್ದಗಂಗಯ್ಯ, ಕಾರ್ಯದರ್ಶಿ ಆರಾಧ್ಯ, ಸಹ ಸದಸ್ಯರನ್ನೊಳಗೊಂಡ 28 ಮಂದಿ ತಂಡ ಕುಡಿಯುವ ನೀರಿನ ಸಮಸ್ಯೆ ಬಗಹರಿಸಲು ಮಾರ್ಗೋಪಾಯ ರೂಪಿಸಲು ಮುಂದಾಯಿತು.
ಜನಪ್ರತಿನಿಧಿಗಳು ಒಟ್ಟುಗೂಡಿ ಒಮ್ಮತದ ನಿರ್ಧಾರ ಕೈಗೊಂಡು ಸ್ವಯಂ ಆರ್ಥಿಕ ಯೋಜನೆಯಡಿ ರೂ.2.71 ಲಕ್ಷ ವೆಚ್ಚದಲ್ಲಿ ನಿರಂತರ ವಿದ್ಯುತ್ (ಎಕ್ಸ್ಪ್ರೆಸ್ ಲೈನ್) ಯೋಜನೆ ಕೈಗೊಳ್ಳಲು ವಿದ್ಯುತ್ ಇಲಾಖೆ ಮನವೊಲಿಸುವಲ್ಲಿ ಯಶಸ್ವಿಯಾದರು.
ಸೋಮವಾರ ವಿದ್ಯುತ್ ಸಂಪರ್ಕಗೊಂಡಾಗ ಗ್ರಾಮ ಪಂಚಾಯಿತಿ ಸದಸ್ಯರಾದ ಹೊನ್ನೇನಹಳ್ಳಿ ಕೃಷ್ಣಪ್ಪ, ಬಸವಯ್ಯ, ಚಂದ್ರಯ್ಯ, ಯದುಕುಲಯ್ಯ ಗ್ರಾಮಸ್ಥರು ಸಂಭ್ರಮಿಸಿದರು.