ಗುಬ್ಬಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 13ನೇ ವಾರ್ಡ್ನಲ್ಲಿನ ರಸ್ತೆ, ಚರಂಡಿಗಳು ಮಳೆನೀರು ಹರಿಯುವಿಕೆಗೆ ಹಾಳಾಗಿವೆ. ಪ್ರಸ್ತುತ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಪ್ರತಿನಿಧಿಸುವ ವಾರ್ಡ್ ಇದಾಗಿದ್ದು, ಉತ್ತಮ ರಸ್ತೆ, ಚರಂಡಿ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪಟ್ಟಣದ ಗಲೀಜು ನೀರು, ಮಳೆನೀರು ಇಲ್ಲಿಂದಲೇ ಹರಿಯಬೇಕು. ಮೂರು ವರ್ಷದ ಹಿಂದೆ ನಿರ್ಮಿಸಿದ್ದ ಚರಂಡಿಯ ಎರಡೂ ಬದಿ ಕುಸಿಯುತ್ತಿದೆ. ಗಲೀಜು ಮುಂದಕ್ಕೆ ಹರಿಯದೇ, ದುರ್ವಾಸನೆ ಬಂದೀತೆಂದು ಸ್ಥಳೀಯರು ಚರಂಡಿಯ ಎರಡೂ ಬದಿಗೆ ಮರದ ದಿಮ್ಮಿಗಳನ್ನು ಅಡ್ಡಲಾಗಿ ಇಟ್ಟಿದ್ದಾರೆ.
ತೋಟದ ಸಾಲಿನಲ್ಲಿರುವ ಮನೆಗಳಿಗೆ ತೆರಳುವ ವಾಹನ ಸವಾರರು, ಮಹಿಳೆಯರು, ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಗಲೀಜು ನೀರು ಮುಂದಕ್ಕೆ ಹರಿಯದೇ, ನಿಂತಲ್ಲೇ ನಿಲ್ಲುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎನ್ನುತ್ತಾರೆ ತೋಟದ ಸಾಲಿನ ವಾಸಿಗಳು.
ಚರಂಡಿ ಒಳಗೆ ಹರಿಯಬೇಕಾದ ಮಳೆನೀರು, ರಸ್ತೆ ಮೇಲೆಹರಿದ ಪರಿಣಾಮ ಸಂಚರಿಸಲು ತೊಂದರೆಯಾಗಿದೆ. ಸಾರ್ವಜನಿಕರೇ ಸ್ವಂತ ಖರ್ಚಿನಿಂದ ಹಲವು ಸಲ ಚರಂಡಿಗಳ ಹೂಳು ಎತ್ತಿ ಶುಚಿಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ ಎನ್ನುವುದು ಸ್ಥಳೀಯ ನಿವಾಸಿ ವೆಂಕಟೇಶ್ ದೂರು.