ಮಧುಗಿರಿ: ಪಟ್ಟಣದ ಮಲ್ಲೇಶ್ವರ ಸ್ವಾಮಿ ಹಾಗೂ ವೆಂಕಟರಮಣ ಸ್ವಾಮಿ ದೇವಾಲಯಗಳಿಗೆ ಮಂಗಳವಾರ ಭೇಟಿ ನೀಡಿದ ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯ ಅಲ್ಲಿನ ನೀರಿನ ಸಮಸ್ಯೆ ಹಾಗೂ ಗೋಡೆ, ಗೋಪುರಗಳಲ್ಲಿ ಗಿಡಗಳು ಬೆಳೆದು ಬೇರು ಇಳಿದನ್ನು ಪರಶೀಲಿಸಿದರು.
ಕೊಳವೆ ಬಾವಿಗೆ ತಕ್ಷಣ ನೂತನ ಪಂಪು-ಮೋಟಾರು ಅಳವಡಿಸಬೇಕು ಹಾಗೂ ಎರಡು ದೇವಾಲಯಗಳಿಗೆ ತಲಾ 5 ಸಾವಿರ ಲೀಟರ್ ಸಾಮರ್ಥ್ಯವುಳ್ಳ ಸಿಸ್ಟನ್ಗಳನ್ನು ವಾರದೊಳಗೆ ಅಳವಡಿಸುವಂತೆ ಕಂದಾಯ ನೀರಿಕ್ಷಕ ಚಿಕ್ಕರಾಜು ಅವರಿಗೆ ಸೂಚಿಸಿದರು.
ಗೋಡೆ ಮತ್ತು ಗೋಪುರಗಳಲ್ಲಿ ಗಿಡಗಳು ಬೆಳದು ಬೇರು ಆಳವಾಗಿ ಇಳಿಯುತ್ತಿರುವುದರಿಂದ ಕಲ್ಲಿನ ಗೋಡೆಗಳು ಸಡಿಲವಾಗುತ್ತಿವೆ. ಅವುಗಳನ್ನು ತಕ್ಷಣ ತೆರವುಗೊಳಿಸಬೇಕು ಹಾಗೂ ಗಿಡಗಳು ಮತ್ತೆ ಚಿಗುರದಂತೆ ತಜ್ಞರೊಂದಿಗೆ ಸಲಹೆ ಪಡೆಯಲಾಗುವುದು ಎಂದು ತಿಳಿಸಿದರು.
‘ದೇಗುಲ ಪೂಜಾ ಕಾರ್ಯಕ್ಕೆ ನೀರಿಲ್ಲ’ ಎಂಬ ಶೀರ್ಷಿಕೆಯಡಿ ಜೂನ್ 11ರಂದು ‘ಪ್ರಜಾವಾಣಿ’ ಯಲ್ಲಿ ವರದಿ ಪ್ರಕಟವಾಗಿತ್ತು. ಅಲ್ಲದೆ ಜೂನ್ 6ರಂದು ‘ಬಿರುಕು ಬಿಟ್ಟ ದೇಗುಲದ ಗೋಡೆಗಳು’ ಶೀರ್ಷಿಕೆಯಡಿ ದೇವಾಲಯದ ಸಮಸ್ಯೆ ಬಗ್ಗೆ ಪತ್ರಿಕೆ ಬೆಳಕು ಚೆಲ್ಲಿತ್ತು. ಈ ವರದಿಗೆ ಸ್ಪಂದಿಸಿದ ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿದ್ದಾರೆ.
ಉಪವಿಭಾಗಾಧಿಕಾರಿ ಕಚೇರಿಯ ಅನಿಲ್, ಗ್ರಾಮಲೆಕ್ಕಿಗ ಶಿವರಾಮಯ್ಯ, ಪ್ರಧಾನ ಅರ್ಚಕರಾದ ಕೆ.ಶ್ರೀನಿವಾಸಭಟ್ಟರು, ನಟರಾಜ್ ಧೀಕ್ಷಿತ್, ಅನಂತ್ ಪದ್ಮನಾಭ , ಮುರುಳಿ ಇದ್ದರು.