ತುಮಕೂರು: ರಾಜ್ಯದಲ್ಲಿ 5ರಿಂದ 8ನೇ ತರಗತಿಯ ಇತಿಹಾಸ ಪಠ್ಯಕ್ರಮವನ್ನು ರಾಜಕೀಯ ಪಕ್ಷಗಳು ತಮ್ಮ ಮೂಗಿನ ನೇರಕ್ಕೆ ಬದಲಿಸುವುದು ತಪ್ಪು ಎಂದು ಭಾರತ ಇತಿಹಾಸ ಸಂಶೋಧನಾ ಸಂಸ್ಥೆ ವಿಶ್ರಾಂತ ನಿರ್ದೇಶಕ ಡಾ.ಎಸ್.ಶೆಟ್ಟರ್ ಇಲ್ಲಿ ಶುಕ್ರವಾರ ಅಭಿಪ್ರಾಯಪಟ್ಟರು.
ಸಿದ್ದಗಂಗಾ ಕಾಲೇಜಿನಲ್ಲಿ ಯುಜಿಸಿ ಪ್ರಾಯೋಜಿತ ರಾಷ್ಟ್ರಮಟ್ಟದ ಇತಿಹಾಸ ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯಕ್ರಮ ಬದಲಿಸುವ ಕುರಿತು ಪೋಷಕರು, ಅಧಿಕಾರಿಗಳು, ವಿದ್ವಾಂಸರ ವಲಯದಲ್ಲಿ ವ್ಯಾಪಕ ಚರ್ಚೆಯಾಗಬೇಕು. ಸಾರ್ವಜನಿಕ ಚರ್ಚೆಯ ನಂತರವಷ್ಟೇ ಸರ್ಕಾರ ತನ್ನ ತೀರ್ಮಾನ ಪ್ರಕಟಿಸಬೇಕು ಎಂದರು.
`ನಮ್ಮ ನಡುವಿನ ಕೆಲವು ವಿದ್ವಾಂಸರು ಸರ್ಕಾರದಿಂದ ಸವಲತ್ತುಗಳಿಗೆ ಬಲಿಯಾಗಿ ರಾಜಕಾರಣಿಗಳ ಮೂಗಿನ ನೇರಕ್ಕೆ ಇತಿಹಾಸ ಪುನರ್ ಸೃಷ್ಟಿಸುತ್ತಿದ್ದಾರೆ. ಸರ್ಕಾರದ ಅಜೆಂಡಾದಂತೆ ಪಠ್ಯಕ್ರಮ ರೂಪಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ~ ಎಂದು ಟೀಕಿಸಿದರು.