ತುಮಕೂರು: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಹಣ ಬಿಡುಗಡೆಯಾಗಿದ್ದು, ಜಿಲ್ಲೆಗೆ ₹ 21.12 ಕೋಟಿ ಬಂದಿದೆ. ರಾಷ್ಟ್ರೀಯ ಕೃಷಿ ವಿಮೆ ಯೋಜನೆ (ಎನ್ಎಐಎಸ್) ಮತ್ತು ‘ಸುಧಾರಿತ ಎನ್ಎಐಎಸ್’ ಯೋಜನೆಗಳಿಗೆ ಬದಲಾಗಿ ಕೇಂದ್ರ ಸರ್ಕಾರವು ಕಳೆದ ವರ್ಷ ಹೊಸದಾಗಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿತ್ತು.
ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ಈ ವಿಮೆ ಯೋಜನೆಯ ಪ್ರಯೋಜನ ಪಡೆಯಬಹುದಾಗಿತ್ತು. ಜಿಲ್ಲೆಯಲ್ಲಿ 1.75 ಲಕ್ಷ ರೈತರು ಬೆಳೆ ಸಾಲ ಪಡೆದಿದ್ದರೂ ಕೇವಲ 26 ಸಾವಿರ ರೈತರು ಮಾತ್ರ ವಿಮೆ ಮಾಡಿಸಿದ್ದರು.
‘ಕೃಷಿ ಇಲಾಖೆಯ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ಸಹಕರಿಸುತ್ತಿಲ್ಲ. ಎಲ್ಲ ರೈತರು ಬೆಳೆ ವಿಮೆ ಮಾಡಿಸುವಂತೆ ನೋಡಿಕೊಳ್ಳಬೇಕು’ ಎಂದು ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಯೋಜನೆಯ ಪ್ರಗತಿ ಪರಿಶೀಲನೆ ಸಭೆ ವೇಳೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದಾಗ್ಯೂ, ನಿಗದಿತ ಗುರಿ ಮುಟ್ಟಲು ಸಾಧ್ಯವಾಗಿರಲಿಲ್ಲ.
‘ಜುಲೈ ತಿಂಗಳಲ್ಲಿ ವಿಮೆ ನೋಂದಣಿಗೆ ಕಡೆಯ ಎರಡು ದಿನಗಳು ಇದ್ದಾಗಲೂ ಕೇವಲ 8113 ರೈತರು ವಿಮೆ ಮಾಡಿಸಿದ್ದರು. ಕಂತು ಕಟ್ಟುವ ಅವಧಿ ವಿಸ್ತರಿಸಿದ ಬಳಿಕ ರೈತರ ಮನವೊಲಿಸಿ 26 ಸಾವಿರ ಮಂದಿಗೆ ವಿಮೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದೆವು’ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
‘ವಿಮೆ ಹಣ ಬಂದಿಲ್ಲ ಎಂದು ಪ್ರತಿ ವರ್ಷ ರೈತರು ದೂರು ಹೇಳುತ್ತಿದ್ದರು. ಆದರೆ ಈ ವರ್ಷ ಮುಂಗಾರು ಆರಂಭಕ್ಕೂ ಮುನ್ನವೇ ವಿಮೆ ಹಣ ಕೈಸೇರಿದೆ. ಹೀಗಾಗಿ ಮುಂಗಾರಿನ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಲಿದೆ’ ಎಂದು ರೈತ ಜಯಪ್ರಕಾಶ್ ತಿಳಿಸಿದರು.