ತುಮಕೂರು: ಆಶ್ರಯ ಮನೆಗಳಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿರುವ ಫಲಾನುಭವಿಗಳಿಗೆ ಎಲ್ಲವೂ ನಿರೀಕ್ಷೆಯಂತೆ ನಡೆದರೆ, ಸರ್ಕಾರ ತಕ್ಷಣ ಅನುದಾನ ನೀಡಿದರೆ, ದಿಬ್ಬೂರಿನ ನಿವೇಶನವೇ ಅಂತಿಮವಾದರೆ ಖಂಡಿತ ಈ ವರ್ಷ ಸ್ವಂತ ಸೂರು ಸಿಗಲಿದೆ. ಮತ್ತೆ ಜನಪ್ರತಿನಿಧಿಗಳ ‘ರಾಜಕೀಯ’ ಮತ್ತು ಜಿಲ್ಲಾಡಳಿತ, ಮಹಾನಗರ ಪಾಲಿಕೆ ದಿವ್ಯ ನಿರ್ಲಕ್ಷ್ಯ ಮುಂದುವರಿದರೆ ಬಡವರ ಸೂರಿನ ಕನಸು ಮತ್ತಷ್ಟು ‘ಗಗನ ಕುಸುಮ’ ಆಗುವುದರಲ್ಲಿ ಅನುಮಾನವೇ ಇಲ್ಲ.
-ಇಂತಹ ಮಾತುಗಳು ಅಧಿಕಾರಶಾಹಿ ವರ್ಗದ ನಡುವೆ ಮತ್ತು ಆಶ್ರಯ ಮನೆಗಳಿಗಾಗಿ ಹೋರಾಟ ನಡೆಸುತ್ತಿರುವ ಸಂಘಟನೆಗಳ ಒಳಗೂ ಧ್ವನಿಸುತ್ತಿದೆ. ನಗರದ ಹತ್ತಿರದಲ್ಲಿ ನಿವೇಶನಕ್ಕೆ ಸೂಕ್ತ ಜಾಗ ಸಿಗದೆ, ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಆಶ್ರಯ ಮನೆ ಕೊಡಲೇಬೇಕೆಂಬ ಇಚ್ಛಾಶಕ್ತಿಯನ್ನು ತೋರದೆ ಯೋಜನೆ ನೆನೆಗುದಿಗೆ ಬಿದ್ದಿರುವುದನ್ನು ಯಾರೂ ಕೂಡ ಅಲ್ಲಗಳೆಯುವುದಿಲ್ಲ.
ಅದರಲ್ಲೂ ಸಾಕಷ್ಟು ಪ್ರಚಾರ ನಡೆಸಿದ್ದರೂ ಯೋಜನೆಯ ಫಲ ಪಡೆಯಲು ಅರ್ಹರು ಮುಂದೆ ಬರುತ್ತಿಲ್ಲ. ಹಾಗಾಗಿಯೇ ಈ ಬಾರಿ ಬಂದಿರುವ ಅರ್ಜಿಗಳು ಕಡಿಮೆಯೇ ಎನ್ನುವುದು ಪಾಲಿಕೆ ಅಧಿಕಾರಿಗಳ ವಾದ.ಆದರೆ, 1992ರಿಂದ ಈವರೆಗೂ ಒಂದೇ ಒಂದು ನಿವೇಶನ, ಮನೆ ವಿತರಿಸದಿದ್ದ ಮೇಲೆ ಯಾವ ನಂಬಿಕೆ, ವಿಶ್ವಾಸ ಹಾಗೂ ಭರವಸೆ ಮೇಲೆ ಅರ್ಜಿ ಸಲ್ಲಿಸುವುದು? ಎನ್ನುವುದು ಫಲಾನುಭವಿಗಳ ಪ್ರಶ್ನೆ.
ಪಾಲಿಕೆ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ನಗರದಲ್ಲಿ ಆಶ್ರಯ ವಂಚಿತ ಫಲಾನುಭವಿಗಳಿಗೆ 2010-11ನೇ ಸಾಲಿನಲ್ಲಿ 600 ಆಶ್ರಯ ನಿವೇಶನ ಮತ್ತು ಮನೆಗಳನ್ನು ಒದಗಿಸಲು ಗುರಿ ನಿಗದಿಪಡಿಸಲಾಗಿದೆ. ಆದರೆ, ಅರ್ಜಿಗಳು ಬಂದಿರುವುದು ತೀರಾ ಕಡಿಮೆ. 120 ಮಂದಿ ಫಲಾನುಭವಿಗಳ ಪಟ್ಟಿಯನ್ನು ಮಾತ್ರ ಸಿದ್ಧಪಡಿಸಲಾಗಿದೆ. ಜತೆಗೆ ಆಶ್ರಯ ಯೋಜನೆಗಾಗಿ ಸರ್ಕಾರದಿಂದ ಅನುದಾನ ಕೂಡ ಬಿಡುಗಡೆಯಾಗಿಲ್ಲ.
ದಿಬ್ಬೂರಿನಲ್ಲಿ ನಿಗದಿಪಡಿಸಿರುವ ಜಾಗದಲ್ಲಿ ಸುಮಾರು 550 ಫಲಾನುಭವಿಗಳಿಗೆ ನಿವೇಶನ ನೀಡಬಹುದು. ಆದರೆ, ಈ ಜಾಗದಲ್ಲಿ ಗುಂಪು ಮನೆ ನಿರ್ಮಿಸಿ, ವಿತರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದು ಅನುಷ್ಠಾನಕ್ಕೆ ಬಂದರೆ ಸುಮಾರು 1500 ಕುಟುಂಬಗಳಿಗೆ ಮನೆ ನೀಡಬಹುದು ಎನ್ನುತ್ತಾರೆ ಅಧಿಕಾರಿಗಳು.ಆದರೆ, ಗುಂಪು ಮನೆ ಬದಲು ಬಹುಮಹಡಿಯ ಮನೆಗಳ ನಿರ್ಮಾಣ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿರುವ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಕಾರ್ಯಾಧ್ಯಕ್ಷ ಸೈಯದ್ ಅಲ್ತಾಫ್, ಮೂರು ಅಂತಸ್ತಿನ ಗುಂಪು ಮನೆ ನಿರ್ಮಿಸಿದರೆ ಅಲ್ಲಿ ಮತ್ತೊಂದು ಕೊಳೆಗೇರಿ ನಿರ್ಮಾಣವಾಗುತ್ತದೆಯಷ್ಟೆ. ಪ್ರತ್ಯೇಕವಾಗಿಯೇ ನಿವೇಶನ ಮತ್ತು ಮನೆ ಒದಗಿಸುವುದು ಸೂಕ್ತ. ಈ ಕೋರಿಕೆಯನ್ನು ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿ ಮುಂದಿಡಲಾಗಿದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಗುಡಿಸಲು ರಹಿತ ರಾಜ್ಯ ನಿರ್ಮಿಸುವ ಸಂಕಲ್ಪ ಮಾಡಿರುವುದಾಗಿ ಹೇಳುತ್ತಿದೆ. ಅವರ ಸಂಕಲ್ಪದಂತೆ, ಅಭಿವೃದ್ಧಿ ನೆಪದಲ್ಲಿ ಗುಡಿಸಲುಗಳಲ್ಲಿ ವಾಸಿಸುತ್ತಿದ್ದವರನ್ನು ಒಕ್ಕಲೆಬ್ಬಿಸಿದ್ದಾರಷ್ಟೆ. ತಾತ್ಕಾಲಿಕ ಆಶ್ರಯವನ್ನೂ ಕಳೆದುಕೊಂಡು ಸಂದಿಗೊಂದಿ, ರಸ್ತೆ ಬದಿಯ ಗುಡಿಸಲುಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಬೆಳಗುಂಬ ರಸ್ತೆ ಬದಿ, ಗುಬ್ಬಿ ವೀರಣ್ಣ ರಂಗಮಂದಿರ ಹಿಂಭಾಗ, ಮಂಡಿಪೇಟೆಯ ಕನ್ಸರ್ವೆನ್ಸಿ, ಬಂಡೆಪಾಳ್ಯದ ರಸ್ತೆ ಬದಿ, ಬನಶಂಕರಿ 2ನೇ ಹಂತ, ಮರಳೂರು ದಿಣ್ಣೆಗೆ ಶಾಸಕರು, ಅಧಿಕಾರಿಗಳು ಒಮ್ಮೆಯಾದರೂ ಭೇಟಿ ನೀಡಬೇಕು. ಆಗಲಾದರೂ ಅವರ ಕಣ್ಣು ತೆರೆಯಬಹುದು ಎನ್ನುತ್ತಾರೆ ಅಲ್ತಾಫ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.