ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ಘಟಕದ ವತಿಯಿಂದ ಎರಡನೇ ವರ್ಷ ನಡೆಯುತ್ತಿರುವ ಮಿಷನ್ ಸಾಹಸಿ ಕಾರ್ಯಕ್ರಮ ಮಂಗಳವಾರ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆ ವಳಕಾಡುವಿನಲ್ಲಿ ನಡೆಯಿತು.
ಒಂದು ವಾರ ಕಾರ್ಯಕ್ರಮ ನಡೆಯಲಿದ್ದು ಉಡುಪಿಯ ಮಹಿಳಾ ಕಾಲೇಜು, ತೆಂಕನಿಡಿಯೂರು, ವಿಬಿಸಿಎಲ್, ಎಂಜಿಎಂ ಕಾಲೇಜಿನ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ತರಬೇತಿ ಗುರಿ ಹೊಂದಲಾಗಿದೆ. ವಿದ್ಯಾರ್ಥಿನಿಯರ ಸ್ವರಕ್ಷಣಾ ಪ್ರಶಿಕ್ಷಣಕ್ಕಾಗಿ 2015ರಲ್ಲಿ ಪ್ರಾರಂಭವಾದ ಕಾರ್ಯಕ್ರಮ ದೇಶದಾದ್ಯಂತ ಅಭಿಯಾನದ ರೂಪವಾಗಿ ನಡೆಯುತ್ತಿದೆ ಎಂದು ಎಬಿವಿಪಿಯ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿಗಳಾದ ಬಸವೇಶ್ ಕೋರಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಕಾರ್ಯಕಾರಿ ಸಮಿತಿ ಅಧ್ಯಕ್ಷ ಶಾಮ್ ಪ್ರಸಾದ್ ಕುಡ್ವ ಮಾತನಾಡಿ, ಎಬಿವಿಪಿ ರಚನಾತ್ಮಕ ಕಾರ್ಯಕ್ರಮಗಳಿಂದ ಮಹಿಳಾ ಸ್ವಾವಲಂಬನೆಗೆ ಪ್ರೇರೇಪಣೆ ಸಿಗುತ್ತಿದೆ ಎಂದರು.
ಶಾಲಾ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಸ್ವಾಗತಿಸಿದರು. ಎಬಿವಿಪಿ ನಗರ ವಿದ್ಯಾರ್ಥಿನಿ ಪ್ರಮುಖ್ ಸಂಹಿತ ಶಾಸ್ತ್ರಿ ವಂದಿಸಿದರು. ಫೀನಿಕ್ಸ್ ಅಕಾಡೆಮಿಯ ಸಂಸ್ಥಾಪಕ ಶಿಹಾನ್ ಕೀರ್ತಿ ತರಗತಿ ಪ್ರಾರಂಭಿಸಿದರು. ನಗರ ಸಹ-ಕಾರ್ಯದರ್ಶಿ ಭಾವನಾ ನಿರೂಪಿಸಿದರು.
ಕರಾಟೆ ತರಬೇತುದಾರ ಲಕ್ಷ್ಮಿಕಾಂತ್, ಎಬಿವಿಪಿಯ ವಿಭಾಗ ಸಂಚಾಲಕ ನಿಶಾನ್ ಆಳ್ವ, ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ, ತಾಲ್ಲೂಕು ಸಂಚಾಲಕ ಅಜಿತ್ ಜೋಗಿ, ನಗರ ಕಾರ್ಯದರ್ಶಿ ಶ್ರೀವತ್ಸ, ಪ್ರಮುಖರಾದ ನವೀನ್, ಕಾರ್ತಿಕ್, ಶಿಶಿರ್, ಅನಂತ್, ಅನೂಪ್, ಮಾಣಿಕ್ಯ ಇದ್ದರು.