ಉಡುಪಿ: ಕೃಷ್ಣಮಠದಲ್ಲಿ ಸೋಮವಾರ ಮಧ್ಯರಾತ್ರಿ 12.17ರ ಕೃಷ್ಣ ಪಕ್ಷದ ರೋಹಿಣಿ ನಕ್ಷತ್ರ ಅಷ್ಟಮಿ ತಿಥಿಯ ಚಂದ್ರೋದಯ ಮಹೂರ್ತದಲ್ಲಿ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಗರ್ಭಗುಡಿಯೊಳಗೆ ಕೃಷ್ಣದೇವರಿಗೆ ಅರ್ಘ್ಯ ಸಮರ್ಪಿಸಿದರು. ಬಳಿಕ ತುಳಸಿ ಕಟ್ಟೆಯಲ್ಲಿ ಚಂದ್ರನಿಗೆ ಅರ್ಘ್ಯ ನೀಡಿದರು.
ಬಳಿಕ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥರು, ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥರು, ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥರು, ದೇವರಿಗೆ ಹಾಗೂ ತುಳಸೀಕಟ್ಟೆಯಲ್ಲಿ ಚಂದ್ರನಿಗೆ ಅರ್ಘ್ಯ ನೀಡಿದರು.
ನಂತರ ಕನಕನ ಕಿಂಡಿಯ ಎದುರು ಹಾಗೂ ಮಧ್ವಮಂಟಪದ ಬಳಿ ಭಕ್ತರಿಗೆ ಅರ್ಘ್ಯಪ್ರಧಾನ ಮಾಡಲು ಅನುಮತಿ ಕಲ್ಪಿಸಲಾಗಿತ್ತು. ಅರ್ಘ್ಯ ನೀಡಿದ ಬಳಿಕ ದೇವರಿಗೆ ಹಲವು ಬಗೆಯ ಉಂಡೆ ಹಾಗೂ ಚಕ್ಕುಲಿಗಳ ನೈವೇದ್ಯ ಅರ್ಪಿಸಲಾಯಿತು.
ವಿಟ್ಲಪಿಂಡಿ ಉತ್ಸವದ ದಿನವಾದ ಮಂಗಳವಾರ ಕೃಷ್ಣ ಸುವರ್ಣ ಮಂಪಟದಲ್ಲಿ ವಜ್ರಕವಚಧಾರಿಯ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ. ನೂರಾರು ಸಂಖ್ಯೆಯ ಭಕ್ತರು ಕೃಷ್ಣನ ದರ್ಶನ ಪಡೆದರು.