ಬ್ರಹ್ಮಾವರ: ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಕಂಚುಕೋಡು ನಿವಾಸಿ 87 ವರ್ಷ ಪ್ರಾಯದ ಅಶ್ವತ್ಥಮ್ಮ ಭಿಕ್ಷೆ ಬೇಡಿ ವಿವಿಧ ದೇವಸ್ಥಾನಗಳಿಗೆ ಇದುವರೆಗೆ ₹ 5 ಲಕ್ಷಕ್ಕಿಂತಲೂ ಅಧಿಕ ಹಣವನ್ನು ದೇವಸ್ಥಾನಗಳ ಅನ್ನದಾನಕ್ಕೆ ದೇಣಿಗೆ ನೀಡಿರುವುದು ಎಲ್ಲರ ಗಮನ ಸೆಳೆದಿದೆ.
ಅಜ್ಜಿ ಎಂದೇ ಜನಜನಿತರಾಗಿರುವ ಅಶ್ವತ್ಥಮ್ಮ ಅವರು, ಗುರುವಾರ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಅನ್ನದಾನ ಸೇವೆಗೆ ₹ 1 ಲಕ್ಷ ದೇಣಿಗೆ ನೀಡಿದರು.
ಸರ್ವರಿಗೂ ಒಳಿತಾಗಲಿ, ಲೋಕಕ್ಕೆ ಹಿತವಾಗಲಿ, ಕೊರೊನಾ ಸೋಂಕು ದೂರವಾಗಲಿ, ಹಸಿದವರ ಹೊಟ್ಟೆ ತುಂಬಲಿ ಎನ್ನುವ ಪ್ರಾರ್ಥನೆಯೊಂದಿಗೆ, ಸಂಗ್ರಹಿಸಿದ ಸಂಪತ್ತಿನ ಒಂದು ಭಾಗವನ್ನು ಸಾಲಿಗ್ರಾಮದ ಗುರುನರಸಿಂಹ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನಗಳ ಅನ್ನದಾನಕ್ಕೆ ನೀಡಿದ್ದಾರೆ.
ದೇಶದ ಉದ್ದಗಲಕ್ಕೂ ಇರುವ ಹಲವು ಪವಿತ್ರ ಕ್ಷೇತ್ರಗಳ ಯಾತ್ರೆ ಮಾಡಿರುವ ಅವರು, ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಶಬರಿಮಲೆಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಪ್ರಯುಕ್ತ ಮಾಲೆಧರಿಸಿ ಸಾಲಿಗ್ರಾಮದ ಗುರುನರಸಿಂಹ ದೇವಳದ ವಠಾರದಲ್ಲಿ ಇದೇ 9 ರಂದು ಇರುಮುಡಿ ಕಟ್ಟುತ್ತಿದ್ದು, ಸಾರ್ವಜನಿಕ ಅನ್ನದಾನ ಸೇವೆ ಮಾಡುತ್ತಿದ್ದಾರೆ. ಮಧ್ಯಾಹ್ನ ನಡೆಯುವ ಅನ್ನಸಂತರ್ಪಣೆಗೆ ಸರ್ವರಿಗೂ ಆಮಂತ್ರಣ ಕೋರಿದ್ದಾರೆ.
ದೇವಳದ ಅರ್ಚಕ ಜನಾರ್ದನ ಅಡಿಗ ಮತ್ತು ವ್ಯವಸ್ಥಾಪಕ ಕೆ.ನಾಗರಾಜ ಹಂದೆ, ದೇವರ ಪ್ರಸಾದ ನೀಡಿ ಗೌರವಿಸಿದರು. ಸಾಲಿಗ್ರಾಮ ಮಯ್ಯ ಟಿಫನ್ ರೂಂನ ಮಾಲೀಕ ರಾಘವೇಂದ್ರ ಹೆಬ್ಬಾರ್ ಮತ್ತು ಮಾನಸ ಸ್ಟುಡಿಯೊ ಮಾಲೀಕ ರವಿಕುಮಾರ್ ಇದ್ದರು.