ಬ್ರಹ್ಮಾವರ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ, ಕೇರಳದ ವತಿಯಿಂದ ಬ್ರಹ್ಮಾವರ ತಾಲ್ಲೂಕಿನ ಕೊರಗ ಸಮುದಾಯದವರಿಂದ ‘ನಮ್ಮ ಭೂಮಿ ನಮ್ಮ ಹಕ್ಕು’ ಧ್ಯೇಯದೊಂದಿಗೆ ಕೃಷಿ ಭೂಮಿಗಾಗಿ ಹಕ್ಕೊತ್ತಾಯ ಮಂಗಳವಾರ ಬ್ರಹ್ಮಾವರ ನಗರದಲ್ಲಿ ನಡೆಯಿತು.
ಕೊರಗ ಮುಖಂಡ ಬೊಗ್ರ ಕೊರಗ ಮಾತನಾಡಿ, ‘ಹಿಂದಿನ ಸರ್ಕಾರ ಅರಣ್ಯ ಭೂಮಿಯನ್ನು ಮುಕ್ತಗೊಳಿಸಿತ್ತು ಮತ್ತು ಕಂದಾಯ ಸಚಿವರಾಗಿದ್ದ ಆರ್.ಅಶೋಕ್ ಅವರು ಗ್ರಾಮ ವಾಸ್ತವ್ಯದಲ್ಲಿ ಜಿಲ್ಲೆಯಲ್ಲಿ ಪ್ರತಿ ಕೊರಗ ಕುಟುಂಬಕ್ಕೆ ಕೃಷಿಗಾಗಿ 1 ಎಕರೆ ಭೂಮಿ ನೀಡುವುದಾಗಿ ಹೇಳಿದ್ದರು. ಆ ಪ್ರಯುಕ್ತ ಕೊರಗ ಸಮುದಾಯ ಭೂ ರಹಿತರನ್ನು ಗುರುತಿಸಿ 123 ಅರ್ಜಿಯನ್ನು ದರ್ಖಾಸ್ತು ನಮೂನೆಯಲ್ಲಿ ಸಲ್ಲಿಸಲಾಗಿತ್ತು. ಆದರೆ ಈ ತನಕ ಯಾವುದೇ ಪ್ರಗತಿ ಕಂಡಿಲ್ಲ. ಸರ್ಕಾರ ನಮಗೆ ಭೂಮಿ ನೀಡಬೇಕು’ ಎಂದರು.
ಇದಕ್ಕೂ ಮುನ್ನ ಜಾಥಾ ಮೂಲಕ ಸಾಗಿ ಬ್ರಹ್ಮಾವರದ ಉಪ ತಹಶೀಲ್ದಾರ್ ರಾಘವೇಂದ್ರ ಅವರಿಗೆ ಒಕ್ಕೂಟದಿಂದ ಮನವಿ ನೀಡಲಾಯಿತು. ಕೊರಗ ಸಂಘಟನೆಯ ಪ್ರಮುಖರಾದ ದಿವಾಕರ ಕಳ್ತೂರು, ಬೇಬಿ ಕೋಟ, ಮಾಲತಿ ಬ್ರಹ್ಮಾವರ, ಅಣ್ಣಿ ಸೂರಾಲು ಇದ್ದರು.