ಉಡುಪಿ: ತಂದೆಯ ತಿಥಿ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ಸಿಗಲಿಲ್ಲ ಎಂದು ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಯೊಬ್ಬರು ಮಂಗಳವಾರ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದರು. ಇದರಿಂದ ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು. ಅಧಿಕಾರಿಗಳು ಮಧ್ಯೆಪ್ರವೇಶಿಸಿ ವ್ಯಕ್ತಿಯ ಮನವೊಲಿಸಿದರು.
ವಿವರ:ತಂದೆಯ ಸಾವಿನ ಸುದ್ದಿ ತಿಳಿದು ವ್ಯಕ್ತಿಯೊಬ್ಬರು ಈಚೆಗೆ ಮಹಾರಾಷ್ಟ್ರದಿಂದ ಉಡುಪಿಗೆ ಬಂದಿದ್ದರು. ಅವರನ್ನು ಇಲ್ಲಿನ ಇಂದಿರಾ ನಗರದ ಕ್ವಾರಂಟೈನ್ ಸೆಂಟರ್ನಲ್ಲಿರಿಸಲಾಗಿತ್ತು. ತಂದೆಯ ತಿಥಿ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ಸಿಗಬಹುದು ಎಂದು 13 ದಿನಗಳಿಂದ ಕಾದರೂ ಪರೀಕ್ಷಾ ವರದಿ ಕೈಸೇರದ ಕಾರಣ ಅಧಿಕಾರಿಗಳು ಮನೆಗೆ ತೆರಳಲು ಅನುಮತಿ ನೀಡಿರಲಿಲ್ಲ.
ಇದರಿಂದ ಸಿಟ್ಟಿಗೆದ್ದ ವ್ಯಕ್ತಿ ಕ್ವಾರಂಟೈನ್ ಸೆಂಟರ್ ಮುಂದೆ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿಯ ಬಳಿ ಅಸಮಾಧನಾ ಹೊರಹಾಕಿದರು. ತಿಥಿ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭ ವಾಗ್ವಾದ ಕೂಡ ನಡೆಯಿತು. ವರದಿ ಬರುವವರೆಗೂ ಮನೆಗೆ ಕಳಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ವ್ಯಕ್ತಿಯ ಮನವೊಲಿಸಿ ಕ್ವಾರಂಟೈನ್ ಕೇಂದ್ರದಲ್ಲಿಯೇ ಉಳಿಯುವಂತೆ ಮಾಡಿದರು.
ಈ ಘಟನೆಯ ಬಗ್ಗೆ ವಾಟ್ಸ್ಆ್ಯಪ್ನಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ರಘುಪತಿ ಭಟ್ ತಂದೆಯ ತಿಥಿ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ಕೇಳಿದ ವ್ಯಕ್ತಿಯ ಪತ್ನಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಹಾಗಾಗಿ, ಅವರನ್ನು ಮನೆಗೆ ಕಳಿಸಲು ಅಧಿಕಾರಿಗಳು ಒಪ್ಪಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.