ಉಡುಪಿ: ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬೆಂಗಳೂರಿಗೆ ಪ್ರಯಾಣ ಬೆಳೆಸಿದ 12 ಮಂದಿ ಸೇರಿ ಜಿಲ್ಲೆಯಲ್ಲಿ ಗುರುವಾರ 22 ಮಂದಿಯಲ್ಲಿ ಕೋವಿಡ್–19 ಸೋಂಕು ದೃಢಪಟ್ಟಿದೆ.
ಮಂಗಳೂರು ಪ್ರಯಾಣದ ಹಿನ್ನೆಲೆ ಇರುವ ನಾಲ್ವರಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಯಾಣ ಸಂಪರ್ಕ ಹೊಂದಿರುವ ಮೂವರಲ್ಲಿ, ಚಿಕ್ಕಮಗಳೂರು ಸಂಪರ್ಕದಿಂದ ಒಬ್ಬರಿಗೆ, ಬೆಂಗಳೂರು ಸಂಪರ್ಕದಿಂದ ನಾಲ್ವರಿಗೆ ಸೋಂಕು ತಗುಲಿದೆ. ಮಹಾರಾಷ್ಟ್ರದಿಂದ ಬಂದ ಒಬ್ಬರಲ್ಲಿ ಕೋವಿಡ್ ಕಾಣಿಸಿಕೊಂಡಿದೆ.
ನೆರೆಯ ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕದಿಂದ 7 ಮಂದಿಯಲ್ಲಿ ಕೋವಿಡ್ ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿಯಾಗಿದೆ. ಸಮುದಾಯಕ್ಕೆ ಸೋಂಕು ತಗುಲಿದೆಯಾ ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.
ಪಿ.30,779,30,780,30,783,30,787,30,796, 30,797 ಸೋಂಕಿತರಿಗೆ ಸೋಂಕು ಹೇಗೆ ತಗುಲಿದೆ ಎಂಬುದನ್ನು ಅಧಿಕಾರಿಗಳು ಪತ್ತೆ ಹೆಚ್ಚುತ್ತಿದ್ದಾರೆ. ರೋಗಿ ಸಂಖ್ಯೆ ಪಿ–4,725 ಸಂಪರ್ಕದಿಂದ ಒಬ್ಬರಿಗೆ,22,930 ವ್ಯಕ್ತಿಯಿಂದ ಇಬ್ಬರಿಗೆ ಸೋಂಕು ಹರಡಿದೆ.
ಸೋಂಕಿತರಲ್ಲಿ 10 ಪುರುಷರು, 10 ಮಹಿಳೆಯರು, ಇಬ್ಬರು ಮಕ್ಕಳಿದ್ದು, ಎಲ್ಲರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗುರುವಾರ 218 ಜನರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 2433 ವರದಿಗಳು ಬರುವುದು ಬಾಕಿ ಇದೆ. ಸೋಕಿನ ಲಕ್ಷಣಗಳು ಕಂಡುಬಂದ 16 ಪುರುಷರು ಹಾಗೂ 8 ಮಹಿಳೆಯರು ಸೇರಿ 24 ಜನರಿಗೆ ಐಸೊಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
28 ಮಂದಿ ಗುಣಮುಖ: ಜಿಲ್ಲೆಯಲ್ಲಿ ಗುರುವಾರ 28 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 1,217 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿತರ ಸಂಖ್ಯೆ 1443ಕ್ಕೇರಿಕೆಯಾಗಿದ್ದು, ಸದ್ಯ ಜಿಲ್ಲೆ 223 ಸಕ್ರಿಯ ಪ್ರಕರಣಗಳು ಇವೆ. ಮೂವರು ಸೋಂಕಿನಿಂದ ಮೃತಪಟ್ಟಿದ್ದಾರೆ.