ಉಡುಪಿ: ಪೇಜಾವರ ಮಠದ ಅಧೋಕ್ಷಜ ವಸತಿಗೃಹದಲ್ಲಿ ಈಚೆಗೆ ಚಿನ್ನಾಭರಣ ಹಾಗೂ ನಗದು ಕಳವು ಮಾಡಲಾಗಿದೆ.
ಮುಂಬೈ ಮೂಲದ ಶಾಂತಾ ಆಚಾರ್ಯ ಉಡುಪಿಯ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದು ಅಧೋಕ್ಷಜ ವಸತಿಗೃಹದಲ್ಲಿ ಉಳಿದುಕೊಂಡಿದ್ದರು.
ವಸತಿಗೃಹ ಕೊಠಡಿಯ ಕಿಟಕಿ ಪಕ್ಕದ ಟೇಬಲ್ ಮೇಲೆ ಇರಿಸಿದ್ದ 10 ಗ್ರಾಂ ಚಿನ್ನದ ಕರಿಮಣಿ ಸರ ಹಾಗೂ ₹ 10,000 ನಗದು ಇದ್ದ ಪರ್ಸ್ ಅನ್ನು ಕಳ್ಳರು ಕಳವು ಮಾಡಿದ್ದಾರೆ. ಕಳುವಾದ ಸ್ವತ್ತುಗಳ ಮೌಲ್ಯ ₹ 50,000 ಎಂದು ಅಂದಾಜಿಸಲಾಗಿದ್ದು, ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲ್ಯಾಪ್ಟಾಪ್ ಕಳವು
ಉಡುಪಿ: ತೆಂಕಪೇಟೆಯಲ್ಲಿ ನಾಗರಾಜ್ ಭಟ್ ಎಂಬುವರ ಮನೆಯಲ್ಲಿ ಶನಿವಾರ ಕಳ್ಳರು ಲ್ಯಾಪ್ಟಾಪ್ ಕಳವು ಮಾಡಿದ್ದಾರೆ. ನಾಗರಾಜ್ ಸಹೋದರಿ ಮನೆಯಲ್ಲಿದ್ದಾಗ ಅವರ ಅರಿವಿಗೆ ಬಾರದಂತೆ ಮನೆಗೆ ನುಗ್ಗಿದ ಕಳ್ಳರು ₹ 35,000 ಮೌಲ್ಯದ ಲ್ಯಾಪ್ಟಾಪ್ ಕಳವು ಮಾಡಿದ್ದಾರೆ. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆರೆಯಲ್ಲಿ ಮುಳುಗಿ ಬಾಲಕ ಸಾವು
ಉಡುಪಿ: ಮಲ್ಪೆಯ ಕೆರೆಮಠದ ಕೆರೆಯಲ್ಲಿ ಆಕಸ್ಮಿಕವಾಗಿ ಮುಳುಗಿ ರಾಘವ ಎಂಬ 7 ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಗಿರೀಶ್ ಉಪಾಧ್ಯಾಯ ಅವರ ಪುತ್ರ ರಾಘವ ಶನಿವಾರ ಮಧ್ಯಾಹ್ನ ಶಾಲೆ ಮುಗಿಸಿ ಸಂಜೆ ಆಡವಾಡಲು ಕೆರೆಮಠದ ಕೆರೆಯ ಬಳಿ ಹೋಗಿದ್ದ ಸಂದರ್ಭ ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.
ಕೆರೆಯ ಬಳಿ ಬಾಲಕನ ಚಪ್ಪಲಿ ಸಿಕ್ಕಿದ್ದು, ಮಲ್ಪೆಯ ಮುಳುಗು ತಜ್ಞ ಈಶ್ವರ ಮಲ್ಪೆ ಕೆರೆಯಲ್ಲಿ ಶೋಧ ನಡೆಸಿದಾಗ ರಾಘವನ ಮೃತದೇಹ ಪತ್ತೆಯಾಗಿದೆ.