ಬ್ರಹ್ಮಾವರ: ಮಕ್ಕಳು ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ತಮ್ಮನ್ನು ಅತೀ ಹೆಚ್ಚು ತೊಡಗಿಸಿಕೊಂಡಷ್ಟು ವಿಶ್ವದರ್ಶನವಾಗುತ್ತದೆ. ನಮ್ಮ ಜೀವನ ಪುಸ್ತಕವಿದ್ದಂತೆ, ಪ್ರತಿಯೊಂದು ಪುಟವನ್ನು ಅತ್ಯಂತ ರಚನಾತ್ಮಕವಾಗಿ ಬರೆದರೆ ಸುಂದರ ಜೀವನ ನಮ್ಮದಾಗುತ್ತದೆ. ಭೂಮಿಯೇ ಸ್ವರ್ಗವಾಗಿದ್ದು ಪ್ರತಿಯೊಂದು ಕ್ಷಣವನ್ನು ಸಂತೋಷದಿಂದ ಕಳೆಯಬೇಕು ಎಂದು ಉಡುಪಿ ನಿಟ್ಟೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುರಳಿ ಕಡೇಕಾರ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಬ್ರಹ್ಮಾವರದ ಪ್ರತಿಷ್ಟಿತ ಜಿ.ಎಂ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಶನಿವಾರ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಜಿ.ಎಮ್ ಪರಿವಾರವನ್ನು ಸೇರಿಕೊಂಡ ಹೊಸ ಶಿಕ್ಷಕ ಹಾಗೂ ವಿದ್ಯಾರ್ಥಿವೃಂದದವರನ್ನು ಸಂಸ್ಥೆಗೆ ಸ್ವಾಗತಿಸುವ ಹಾಗೂ ಅವರ ಪ್ರತಿಭೆಯನ್ನು ಅನಾವರಣಗೊಳಿಸುವ ವಿನೂತನ ಕಾರ್ಯಕ್ರಮ ಪ್ರೆಶರ್ಸ್ ಡೇಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಪ್ರಾಂಶುಪಾಲ ಬ್ರಹ್ಮಾಚಾರಿ ಕೆ ಎನ್ ವಿದ್ಯಾರ್ಥಿಗಳು ಕೇವರ ಅಂಕಗಳಿಗೆ ಪ್ರಾಮುಖ್ಯತೆಯನ್ನು ಕೊಡದೆ ಸಹಪಠ್ಯ ಚಟುವಟಿಕೆಗಳಿಗೆ ಸಮಾನ ಮಾನ್ಯತೆ ನೀಡಬೇಕು ಎಂದರು.
ಶಾಲಾ ಶೈಕ್ಷಣಿಕ ಸಂಯೋಜಕ ಪ್ರಣವ್ ಶೆಟ್ಟಿ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಸದಸ್ಯೆ ತಾರಾಪ್ರಕಾಶ್ಚಂದ್ರ ಶೆಟ್ಟಿ, ಶಿಕ್ಷಕ ವೃಂದ, ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು.