ಉಡುಪಿ: ಬೈಂದೂರು ತಾಲ್ಲೂಕಿನಾದ್ಯಂತ ಭಾರಿ ಮಳೆ ಸುರಿದಿದ್ದು ಶಿರೂರು ಕಳುಹಿತ್ಲು ಭಾಗದಲ್ಲಿ ತೀರದಲ್ಲಿದ್ದ ದೋಣಿಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ.
30ಕ್ಕೂ ಹೆಚ್ಚು ದೋಣಿಗಳು ಹಾನಿಗೀಡಾಗಿದ್ದು ಮೀನುಗಾರರಿಗೆ ಅಪಾರ ನಷ್ಟ ಉಂಟಾಗಿದೆ.
ಸೋಮವಾರ ಸಂಜೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ತಾಲ್ಲೂಕಿನ ಶಿರೂರು, ಯಡ್ತರೆ, ತಗ್ಗರ್ಸೆ, ನಾವುಂದ, ಕಿರಿಮಂಜೇಶ್ವರ ಮೊದಲಾದ ಗ್ರಾಮಗಳಲ್ಲಿ ನೆರೆ ಬಂದಿದೆ. ಗದ್ದೆ ಹಾಗೂ ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ.