ಬ್ರಹ್ಮಾವರ: ಕೇಂದ್ರ ಸರ್ಕಾರ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಜಲಜೀವನ್ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ ಅದರ ಕಾರ್ಯಗಳೇ ಕಳಪೆಯಾಗುತ್ತಿವೆ ಎಂದು ಐರೋಡಿ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಮಾಜಿ ಅಧ್ಯಕ್ಷ ವಿಠ್ಠಲ ಪೂಜಾರಿ ಆರೋಪಿಸಿದರು.
ಹಂಗಾರಕಟ್ಟೆ ದೂಳಂಗಡಿ ಶಾಲೆಯಲ್ಲಿ ನಡೆದ ಐರೋಡಿ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪರವಾಗಿ ಮಾತನಾಡಿದ ಅವರು, ಅಲ್ಲಿ ಅಳವಡಿಸಲಾದ ಪೈಪ್ ಗುಣಮಟ್ಟದ್ದಲ್ಲ. ಪೈಪ್ ಅನ್ನು ಗುಂಡಿ ಅಗೆಯದೆ ರಸ್ತೆಯ ಮೇಲ್ಗಡೆಯೇ ಅಳವಡಿಸಲಾಗಿದೆ. ಕೆಲವೊಂದು ಭಾಗದಲ್ಲಿ ರಸ್ತೆ ಅಗೆದು ಜನಸಾಮಾನ್ಯರಿಗೆ ಸಂಚರಿಸಲು ಕಷ್ಟಕರವಾಗಿಸಿದ್ದಾರೆ. ಯೋಜನೆ ನಾಮಕಾವಸ್ಥೆಗೆ ಮಾಡಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಮಗಾರಿ ನಡೆಯುವ ಸಂದರ್ಭದಲ್ಲಿ ಇಂಜಿನಿಯರ್ ಸ್ಥಳದಲ್ಲಿರುವುದಿಲ್ಲ. ಸರ್ಕಾರ ಹಣ ಪೋಲಾಗದಂತೆ ಲೋಕಾಯುಕ್ತಕ್ಕೆ ತನಿಖೆಗೆ ಒಳಪಡಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು. ಈ ಬಗ್ಗೆ ಪಂಚಾಯಿತಿ ನಿರ್ಣಯ ಕೈಗೊಂಡಿತಲ್ಲದೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾಮಗಾರಿ ನಡೆದ ಸ್ಥಳ ಪರಿಶೀಲನೆಗೆ ಒಳಪಡಿಸುವುದಾಗಿ ನಿರ್ಣಯಿಸಲಾಯಿತು.
ಸಾಸ್ತಾನ ಕೋಡಿ ಸಂಪರ್ಕಿಸುವ ರಸ್ತೆಯಲ್ಲಿ ವಾರದ ಸಂತೆ ದಿನದಂದು ರಸ್ತೆ ಸಂಚಾರಕ್ಕೆ ಸಮಸ್ಯೆ ಎದುರಾಗುತ್ತಿದೆ. ಅಲ್ಲಿ ವ್ಯವಹರಿಸುವ ಅಂಗಡಿ ಮುಂಗಟ್ಟಿನವರಿಗೆ ಪಾರ್ಕಿಂಗ್ ಸ್ಥಳ ಬಿಟ್ಟು ವ್ಯವಹರಿಸಲು ಲೈಸೆನ್ಸ್ ನೀಡುವಾಗಲೇ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಆಯುಷ್ಮಾನ್ ಯೋಜನೆಗೆ ಸಂಬಂಧಿಸಿದ ಸಮಸ್ಯೆ, ಪರಿಶಿಷ್ಟ ಜಾತಿ ಪಂಗಡದವರಿಗೆ ಪಂಚಾಯಿತಿ ವತಿಯಿಂದ ಪ್ರತಿ ಮನೆಗೆ ಸೋಲಾರ್ ನೀಡಿರುವ ಬಗ್ಗೆ, ಸಿಆರ್ಝೆಡ್ ಸಮಸ್ಯೆಯ ಬಗ್ಗೆ ಗಮನ ಸೆಳೆಯಲಾಯಿತು.
ಪಂಚಾಯಿತಿ ಅಧ್ಯಕ್ಷೆ ಗೀತಾ ಶೆಟ್ಟಿ, ಉಪಾಧ್ಯಕ್ಷ ನಟರಾಜ ಗಾಣಿಗ, ಅಭಿವೃದ್ಧಿ ಅಧಿಕಾರಿ ರಾಜೇಶ ಶೆಣೈ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.