ಏ.28ರಂದು ರಾತ್ರಿ ಮಲ್ಪೆಯ ಮೀನುಗಾರ ಮುಖಂಡರು, ನಾಪತ್ತೆಯಾದ ಮೀನುಗಾರರ ಕುಟುಂಬದ ಸದಸ್ಯರು ಮಾಜಿ ಕ್ಯಾಪ್ಟನ್ ಅವರನ್ನೊಳಗೊಂಡ 10 ಜನರ ತಂಡ ಕಾರವಾರ ನೌಕಾನೆಲೆಯಿಂದ ಐಎನ್ಎಸ್ ನಿರೀಕ್ಷಕ್ ಹಡಗಿನಲ್ಲಿ ಶೋಧ ಕಾರ್ಯಕ್ಕೆ ತೆರಳಿದೆವು. 3 ದಿನ ಸಮುದ್ರದಾಳದಲ್ಲಿ ಸೋನಾರ್ ತಂತ್ರಜ್ಞಾನದ ನೆರವಿನಿಂದ ಕಾರ್ಯಾಚರಣೆ ನಡೆಯಿತು. ಸ್ಥಳೀಯ ಮೀನುಗಾರರ ಶ್ರಮದಿಂದ ಗುರುವಾರ ರಾತ್ರಿ ಸುವರ್ಣ ತ್ರಿಭುಜ ಬೋಟ್ನ ಅವಶೇಷಗಳು ಮಹಾರಾಷ್ಟ್ರದ ಮಾಲ್ವಾನ್ ಪ್ರದೇಶದಿಂದ 65 ಕಿ.ಮೀ ದೂರದಲ್ಲಿ ಪತ್ತೆಯಾಯಿತು. ನೌಕಾಪಡೆ ಅಧಿಕಾರಿಗಳು ಬೋಟ್ನ ಅವಶೇಷಗಳ ಫೋಟೊಗಳನ್ನು ತೆಗೆದು, ಚಿತ್ರೀಕರಣ ಮಾಡಿದ್ದಾರೆ. ಶೀಘ್ರವೇ ದಾಖಲೆಗಳನ್ನು ಪೊಲೀಸ್ ಇಲಾಖೆಗೆ ಕಳುಹಿಸಲಿದ್ದಾರೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.