ಉಡುಪಿ: ಕಲ್ಮಾಡಿಯಲ್ಲಿರುವ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರ ಎಂದು ಘೋಷಿಸುವ ಹಾಗೂ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚ್ನ ಸುವರ್ಣ ಮಹೋತ್ಸವದ ಅಂಗವಾಗಿ ಭಾನುವಾರ ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ಆದಿ ಉಡುಪಿ ಜಂಕ್ಷನ್ನಿಂದ ಕಲ್ಮಾಡಿ ಚರ್ಚ್ವರೆಗೆ ನಡೆಯಿತು.
ಶಾಸಕ ರಘುಪತಿ ಭಟ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಉಡುಪಿ ಧರ್ಮಕ್ಷೇತ್ರದಲ್ಲಿ ಅತ್ತೂರು, ಕೆರೆಕಟ್ಟೆ ಬಳಿಕ ಕಲ್ಮಾಡಿ ಮೂರನೇ ಪುಣ್ಯಕ್ಷೇತ್ರವಾಗಿ ಘೋಷಿಸಲ್ಪಡುತ್ತಿರುವುದು ಸಂತೋಷದ ವಿಷಯ. ಮುಂದೆ ಭಕ್ತರ ಸಂಖ್ಯೆಯಲ್ಲಿ ಹೆಚ್ಚಾಗಲಿದೆ. ಆದಿ ಉಡುಪಿಯಿಂದ ಮಲ್ಪೆವರೆಗಿನ ರಸ್ತೆಯು ಶೀಘ್ರದಲ್ಲಿ ಚತುಷ್ಪಥವಾಗಿ ಮಾರ್ಪಾಡಾಗಲಿದ್ದು, ಮಲ್ಪೆ ಬೀಚ್ ಹಾಗೂ ಕಲ್ಮಾಡಿ ಚರ್ಚಿಗೆ ಭೇಟಿ ನೀಡಲಿರುವ ಯಾತ್ರಿಕರಿಗೆ ಅನುಕೂಲವಾಗಲಿದೆ ಎಂದರು.
ಚರ್ಚ್ನ ಧರ್ಮಗುರು ಬ್ಯಾಪ್ಟಿಸ್ಟ್ ಮಿನೇಜಸ್, ಸಹಾಯಕ ಧರ್ಮಗುರು ರೋಯ್ ಲೋಬೊ, ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಬಾ ಮೆಂಡೋನ್ಸಾ, ಕಲ್ಮಾಡಿ ವಾರ್ಡ್ ಸದಸ್ಯ ಸುಂದರ ಕಲ್ಮಾಡಿ, 20 ಆಯೋಗಗಳ ಸಂಯೋಜಕಿ ಐಡಾ ಡಿಸೋಜಾ, ಸುವರ್ಣ ಮಹೋತ್ಸವದ ಸಂಯೋಜಕ ಸಂದೀಪ್ ಅಂದ್ರಾದೆ ಇದ್ದರು.
ಕಲ್ಮಾಡಿಯಲ್ಲಿನ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಘೋಷಿಸುವ ಹಾಗೂ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಸುವರ್ಣ ಮಹೋತ್ಸವ ಕಾರ್ಯಕ್ರಮ ಆ.15 ರಂದು ನಡೆಯಲಿದೆ.