ಕುಂದಾಪುರ: ‘ಕಂಬಳ, ಕೋಲ, ಜನಪದ, ಬುಡಕಟ್ಟು ಸಮುದಾಯದ ಜೀವನದ ಪರಿಕಲ್ಪನೆಯನ್ನು ಇಟ್ಟುಕೊಂಡು ಮಾಡಿರುವ ಕಾಂತಾರ ಸಿನಿಮಾ ದಿಗ್ಭ್ರಮೆಗೊಳಿಸಿದೆ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟೇಶ್ವರದ ಭಾರತ್ ಸಿನಿಮಾ ಮಂದಿರದಲ್ಲಿ 125 ಕ್ಕೂ ಹೆಚ್ಚು ದೈವ ನರ್ತಕರು, ದರ್ಶನ ಪಾತ್ರಿಗಳು, ಸ್ಥಳೀಯ ಕಲಾವಿದರ ಜತೆಗೆ ಚಿತ್ರ ವೀಕ್ಷಣೆ ಮಾಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
‘ನಮ್ಮೂರ ಹುಡುಗ ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ನಟನೆಯ ಕಾಂತಾರ ಸಿನಿಮಾವನ್ನು ನೋಡಬೇಕು ಎನ್ನುವ ಆಸೆ ಇತ್ತು. 31 ವರ್ಷದ ಬಳಿಕ ಕುಟುಂಬ ಸಮೇತವಾಗಿ ಚಿತ್ರ ಮಂದಿರಕ್ಕೆ ಬಂದು ಚಿತ್ರ ನೋಡಿರುವ ಬಗ್ಗೆ ಸಂತೃಪ್ತಿ ಇದೆ’ ಎಂದರು.
ಸಿನಿಮಾ ಮಂದಿರಕ್ಕೆ ಬಂದ ಸಚಿವರನ್ನು ದೈವ ನರ್ತಕರು ಹಾಗೂ ದರ್ಶನ ಪಾತ್ರಿಗಳು ಗುಲಾಬಿ ಹೂ ನೀಡಿ ಸ್ವಾಗತಿಸಿದರು.
ಸಚಿವರ ಪತ್ನಿ ಶಾಂತಾ ಪೂಜಾರಿ, ಪುತ್ರಿಯರಾದ ಸ್ವಾತಿ ಹಾಗೂ ಶ್ರುತಿ, ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ ಗೊಲ್ಲ, ಸದಸ್ಯ ಲೋಕೇಶ್ ಅಂಕದಕಟ್ಟೆ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಭಾಸ್ಕರ ಬಿಲ್ಲವ, ಮಾಜಿ ಸದಸ್ಯ ಕರುಣ್ ಪೂಜಾರಿ ಇದ್ದರು.