ಉಡುಪಿ: ಮಕರ ಸಂಕ್ರಮಣ ದಿನವಾದ ಗುರುವಾರ ಸಾರ್ವಜನಿಕರು ಎಳ್ಳು–ಬೆಲ್ಲ–ಕಬ್ಬು ಸವಿದು ಹಬ್ಬವನ್ನು ಸಂಭ್ರಮಿಸಿದರು. ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಕಬ್ಬು, ಹೂ, ಹಣ್ಣು ಖರೀದಿ ಭರಾಟೆ ಜೋರಾಗಿತ್ತು.
ಕೃಷ್ಣಮಠದಲ್ಲಿ ತಿಂಗಳಿನಿಂದ ಕೃಷ್ಣ ದೇವರಿಗೆ ಪ್ರಾತಃ ಕಾಲದಲ್ಲಿ ಧನುರ್ಮಾಸದ ವಿಶೇಷ ಪೂಜೆ ನಡೆಯುತ್ತಿದ್ದು, ಮಕರ ಸಂಕ್ರಮಣ ದಿನವಾದ ಗುರುವಾರ ಪರ್ಯಾಯ ಅದಮಾರು ಮಠದ ಈಶಪ್ರಿಯತೀರ್ಥ ಶ್ರೀಗಳು ಶಾರ್ವರಿ ಸಂವತ್ಸರದ ಕೊನೆಯ ಧನುರ್ಮಾಸ ಪೂಜೆ ನೆರವೇರಿಸಿದರು. ಕೃಷ್ಣನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಕರಂಬಳ್ಳಿ ವೆಂಕಟ ರಮಣಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ತುಳಸಿ ಅರ್ಚನೆ ನೆರವೇರಿತು. ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ವೆಂಕಟ ರಮಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮಾವಳಿ ಪಾರಾಯಣ, ನವಗ್ರಹ ಯಾಗ ನೆರವೇರಿತು.