ಉಡುಪಿ: ಮಲ್ಪೆಯ ಪಡುಕೆರೆಯಲ್ಲಿ ಉದ್ದೇಶಿತ ಮರೀನಾ ಯೋಜನೆಗೆ ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಪಡುಕೆರೆಯ ಬಾಲಾಂಜನೇಯ ಪೂಜಾ ಮಂದಿರ ಆವರಣದಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಮುಖಂಡರು ಯೋಜನೆ ಅನುಷ್ಠಾನಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಮಲ್ಪೆ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಜನಾರ್ಧನ ತಿಂಗಳಾಯ ಮಾತನಾಡಿ, ಐಶಾರಾಮಿ ಮರೀನಾ ನಿರ್ಮಾಣದಿಂದ ಬಡವರ ಎತ್ತಂಗಡಿ ಆತಂಕ ಕಾಡುತ್ತಿದ್ದು, ಯೋಜನೆ ಜಾರಿ ಬೇಡ.ಮರೀನಾ ನಿರ್ಮಾಣ ಯೋಜನೆಯಲ್ಲಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಯೋಜನೆ ವಿರುದ್ಧ ಸಂಘಟಿತ ಹೋರಾಟ ಅಗತ್ಯ ಎಂದರು.
ಮೀನುಗಾರ ಮುಖಂಡ ರಾಮ ಕಾಂಚನ್ ಮಾತನಾಡಿ, ಮರೀನಾ ನಿರ್ಮಾಣದಿಂದ ಸ್ಥಳೀಯರು ನೆಲೆ ಕಳೆದುಕೊಳ್ಳುವ ಆತಂಕವಿದ್ದು, ಬಂದರಿನ ಚಟವಟಿಕೆಗಳಿಗೂ ತೊಡಕಾಗಲಿದೆ. ಯೋಜನೆ ಬಗ್ಗೆ ಜನಾಭಿಪ್ರಾಯ ಸಂಗ್ರಹ ಅಗತ್ಯವಿದೆ ಎಂದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ ಮಾತನಾಡಿ, ಯೋಜನೆ ಕೈಬಿಡುವಂತೆ ಒತ್ತಾಯಿಸಿ ಶಾಸಕರಿಗೆ ಪತ್ರ ಬರೆಯಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಗೂ ಮನವಿ ಸಲ್ಲಿಸಲಾಗುವುದು ಎಂದರು.