ಪಡುಬಿದ್ರಿ: ಪಲಿಮಾರಿನಲ್ಲಿ ಶಾಂಭವಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಉಪ್ಪು ನೀರು ತಡೆ ಅಣೆಕಟ್ಟೆ ಅವೈಜ್ಞಾನಿಕ ಕಾಮಗಾರಿ ಹಾಗೂ ಅಸಮರ್ಪಕ ನಿರ್ವಹಣೆಯಿಂದ ಆಗಿರುವ ಸಮಸ್ಯೆಯ ಬಗ್ಗೆ ಗ್ರಾಮಸ್ಥರ ದೂರಿನ ಹಿನ್ನಲೆಯಲ್ಲಿ ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಮೂಡುಪಲಿಮಾರು ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿದರು.
ಅಣೆಕಟ್ಟೆ ಸಹಿತ ಮುಳುಗಡೆ ಸ್ಥಳಗಳನ್ನು ವೀಕ್ಷಿಸಿದ ತಹಶೀಲ್ದಾರ್ ಸ್ಥಳೀಯರಿಂದ ಮಾಹಿತಿ ಪಡೆದರು. ಅಣೆಕಟ್ಟೆ ಪ್ರದೇಶದಲ್ಲಿನ ಅಸಮರ್ಪಕ ಕಾಮಗಾರಿ ಹಾಗೂ ಈ ಹಿಂದಿದ್ದ ತೋಡುಗಳ ಅಸಮರ್ಪಕ ನಿರ್ವಹಣೆಯಿಂದ ತೊಂದರೆಗಳಾಗುತ್ತಿವೆ. ಈ ಪ್ರದೇಶದಲ್ಲಿ ಇದ್ದ ಕಿಂಡಿ ಅಣೆಕಟ್ಟೆಗಳು ನಾದುರಸ್ತಿಯಲ್ಲಿವೆ. ಎರಡು ಕಿಂಡಿ ಅಣೆಕಟ್ಟೆಗಳ ಅವಶ್ಯಕತೆಯಿದ್ದು, ಅದನ್ನು ನಿರ್ಮಿಸಿ ನೀರು ನಿರ್ವಹಣೆಗೆ ಕ್ರಮ ವಹಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಯೇಶ್ ಪೈ ಗಮನಕ್ಕೆ ತಂದರು.
ನೀರು ನಿಂತ ಪರಿಣಾಮ ಜಲಜೀವನ್ ಮಿಷನ್ ಯೋಜನೆಗಾಗಿ ನಿರ್ಮಿಸಿರುವ ಬಾವಿ ಮಲಿನವಾಗುವ ಭೀತಿಯಿದೆ. ಇದು ಪಲಿಮಾರು ಗ್ರಾಮಕ್ಕೆ ಸಮಸ್ಯೆ ತಂದೊಡ್ಡಲಿದೆ ಎಂದು ದೂರಿದರು. ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ ಸಹಿತ ಸಣ್ಣ ನೀರಾವರಿ ಇಲಾಖೆ ಗಮನಕ್ಕೂ ತರುವುದಾಗಿ ತಿಳಿಸಿದರು.
ಗ್ರಾಮಸ್ಥರ ಮನವಿ: ಪಲಿಮಾರು ಶಾಂಭವಿ ನದಿಯ ಅಣೆಕಟ್ಟೆ ಸಮಸ್ಯೆಯನ್ನು ಪರಿಹರಿಸುವಂತೆ ಆಗ್ರಹಿಸಿ ಮೂಡುಪಲಿಮಾರು ಗ್ರಾಮಸ್ಥರು ಪಲಿಮಾರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.
ಅಣೆಕಟ್ಟೆ ಭಾಗದಲ್ಲಿ 150 ಎಕರೆ ಕೃಷಿಭೂಮಿ ಮುಳುಗಡೆಯಾಗಿದ್ದು, ಜನ ಹಾಗೂ ಜಾನುವಾರುಗಳಿಗೆ ತೊಂದರೆಯಾಗಿದೆ. ಬೆಳೆದ ತರಕಾರಿ ಸಹಿತ ಫಸಲು ನೀರಿನಲ್ಲಿ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಅಣೆಕಟ್ಟೆ ಹಲಗೆ ಮಟ್ಟ ಏರಿಕೆ ಮಾಡಿದ ಪರಿಣಾಮ ಮೂಡು ಪಲಿಮಾರು ಭಾಗದಲ್ಲಿ ಪ್ರತೀ ವರ್ಷ ಸಮಸ್ಯೆಗಳಾಗುತ್ತಿವೆ. ಜಾನುವಾರುಗಳಿಗೆ ಮೇವು ಇಲ್ಲದಾಗಿದೆ. ಕುಡಿಯುವ ನೀರಿನ ಬಾವಿಗಳು ಮಲಿನಗೊಂಡಿವೆ. ಎಲ್ಲೆಡೆ ನೀರು ನಿಂತು ಮಲಿನಗೊಂಡು ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ನೀರು ತುಂಬಿ ಮುಳುಗಡೆಯಾಗಿರುವ ಪ್ರದೇಶದಲ್ಲಿ ಮಕ್ಕಳು, ಜಾನುವಾರುಗಳು ತೆರಳಿದರೆ ಅನಾಹುತವಾಗುವ ಸಾಧ್ಯತೆಗಳಿವೆ ಎಂದು ಗ್ರಾಮಸ್ಥರು ದೂರಿದರು.
ಅಧಿಕಾರಿಗಳು ಸಮಸ್ಯೆ ಗಂಭೀರತೆ ಅರಿತು ಪರಿಹರಿಸದಿದ್ದಲ್ಲಿ ಅಣೆಕಟ್ಟೆ ಪ್ರದೇಶವನ್ನು ಸಂಪೂರ್ಣ ಮುಳುಗಡೆ ಪ್ರದೇಶವೆಂದು ಘೋಷಿಸಬೇಕು. ಸಮಸ್ಯೆ ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಎದುರು ನಿರಂತರ ಧರಣಿ ನಡೆಸಲಾಗುವುದು ಎಂದು ಕೃಷಿಕ ದೀಪಕ್ ಪೈ ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿ ಡಿ. ಪ್ರಭು, ಪಿಡಿಒ ಪಿ.ಶಶಿಧರ್ ಹಾಗೂ ಗ್ರಾಮ ಕರಣಿಕ ಸುನಿಲ್ ಅವರಿಗೆ ಮನವಿ ನೀಡಿದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಪಿಡಿಒ, ಮೂಡು ಪಲಿಮಾರು ಹಾಗೂ ಹೊಯಿಗೆ ಭಾಗಕ್ಕೆ ಅಣೆಕಟ್ಟೆಯಿಂದ ಸಮಸ್ಯೆಗಳಾಗುತ್ತಿದ್ದು, ಸಂಬಂಧಿಸಿದ ಇಲಾಖೆ ಗಮನಕ್ಕೆ ತರುವುದಾಗಿ ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯೆ ಪ್ರಿಯಾ ಶೆಟ್ಟಿ, ಮಾಜಿ ಅಧ್ಯಕ್ಷೆ ಮಾಲತಿ ದಿವಾಕರ್, ಹರೀಶ್ ಶೆಟ್ಟಿ ನಂದಿಮನೆ, ಸುಜಾತಾ, ಮೀನಾಕ್ಷಿ, ಜಯಲಕ್ಷ್ಮಿ, ಹೇಮಲತಾ, ಮಲ್ಲಿಕಾ ದೇವಾಡಿಗ, ಸುರೇಶ್ ಶೆಟ್ಟಿ, ಸುರೇಂದ್ರ ದೇವಾಡಿಗ, ಲೀಲಾಧರ ದೇವಾಡಿಗ, ಪ್ರವೀಣ್ ರೈ, ದೇವಸಾಸ್ ಮೂಡು ಪಲಿಮಾರು, ನಾರಾಯಣ ದೇವಾಡಿಗ, ಗಣೇಶ್ ಶೆಟ್ಟಿ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.