ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕರ ನೋವುಗಳಿಗೆ '112' ಸ್ಪಂದನ

ಪ‍ರಿಣಾಮಕಾರಿಯಾಗಿ ಸಹಾಯವಾಣಿ ಅನುಷ್ಠಾನಕ್ಕೆ ಸೂಚನೆ: ಪ್ರವೀಣ್ ಸೂದ್‌
Last Updated 8 ಸೆಪ್ಟೆಂಬರ್ 2020, 14:25 IST
ಅಕ್ಷರ ಗಾತ್ರ

ಉಡುಪಿ:ಸಾರ್ವಜನಿಕರು ಸಮಸ್ಯೆ ಹೇಳಿಕೊಳ್ಳಲು ನಿರ್ಧಿಷ್ಟವಾದ ವೇದಿಕೆ ಇರಬೇಕು ಎಂಬ ಉದ್ದೇಶದಿಂದ ಜಿಲ್ಲೆಯಲ್ಲಿ 112 ಸಹಾಯವಾಣಿ ಬಲಗೊಳಿಸಲಾಗುತ್ತಿದೆ. ಬೆಂಗಳೂರು ಮಾದರಿಯಲ್ಲಿ ಉಡುಪಿಯಲ್ಲಿ 112 ಸೇವೆಯನ್ನು ಅಕ್ಟೋಬರ್‌ನಿಂದ ಪರಿಣಾಮಕಾರಿ ಅನುಷ್ಠಾನಗೊಳಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಹೇಳಿದರು.

ಎಸ್‌ಪಿ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೋವಿಡ್‌ನಿಂದಾಗಿ ಪೊಲೀಸ್ ಇಲಾಖೆಯಲ್ಲಿ ತಂತ್ರಜ್ಞಾನ ಬಳಕೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸಾರ್ವಜನಿಕರು ಸಣ್ಣ ಕೆಲಸಗಳಿಗೂ ಠಾಣೆಗಳಿಗೆ ಬರುವುದನ್ನು ತಪ್ಪಿಸಲು, ಹಂತ ಹಂತವಾಗಿ ಪೊಲೀಸ್ ಠಾಣೆಗಳಲ್ಲಿ ಸಿಗುತ್ತಿರುವ ಎಲ್ಲ ಸೇವೆಗಳನ್ನು ಆನ್‌ಲೈನ್‌ನಲ್ಲಿಯೇ ಸಿಗುವಂತೆ ಮಾಡಲಾಗುವುದು ಎಂದರು.

ಪಶ್ಚಿಮ ವಲಯ ವ್ಯಾಪ್ತಿಗೊಳಪಡುವ ಕರಾವಳಿಯ ಜಿಲ್ಲೆಗಳಲ್ಲಿ ವಿದ್ಯಾವಂತರು ಹೆಚ್ಚಾಗಿದ್ದಾರೆ. ತಂತ್ರಜ್ಞಾನ ಬಳಕೆಯ ಪ್ರಮಾಣವೂ ಹೆಚ್ಚಾಗಿದೆ. ಈ ಭಾಗದಲ್ಲಿ ಪೊಲೀಸ್ ಇಲಾಖೆ ಆನ್‌ಲೈನ್ ಸೇವೆಗಳನ್ನು ಅನುಷ್ಠಾನಗೊಳಿಸುವುದು ಕಷ್ಟವಲ್ಲ ಎಂದರು.

ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕಳೆದ 10 ದಿನಗಳಿಂದ ಡ್ರಗ್ಸ್‌ ಜಾಲದ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದೆ. ಮಾದಕ ವಸ್ತುಜಾಲವನ್ನು ಬೇರುಸಹಿತ ಕಿತ್ತೊಗೆಯಲು ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಮಾತ್ರೆಗಳು, ಚಾಕ್‌ಲೇಟ್‌ ಹಾಗೂ ಪಾನೀಯಗಳಲ್ಲಿ ಅಪಾಯಕಾರಿ ಸಿಂಥೆಟಿಕ್‌ ಹಾಗೂ ಡಿಸೈನರ್ ಡ್ರಗ್ಸ್‌ ಬಳಕೆಯಾಗುತ್ತಿರುವ ಮಾಹಿತಿಯಿದ್ದು, ಈ ಜಾಲವನ್ನು ಮಟ್ಟಹಾಕುವಂತೆ ನಿರ್ದೇಶನ ನೀಡಲಾಗಿದೆ. ಬೆಂಗಳೂರು ಡ್ರಗ್ಸ್‌ ಜಾಲದಲ್ಲಿ ಈಗಾಗಲೇ ಹಲವರನ್ನು ಬಂಧಿಸಲಾಗಿದ್ದು, ತನಿಖೆ ಮುಗಿದ ಬಳಿಕ ಮಾಹಿತಿ ನೀಡಲಾಗುವುದು ಎಂದರು.

ಪೊಲೀಸ್ ಇಲಾಖೆಯಲ್ಲಿ ಟಿಎ, ಡಿಎ ಸಮಸ್ಯೆಗಳು ಎದುರಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಬಡ್ತಿ ವಿಚಾರದಲ್ಲಿ ಸಿಬ್ಬಂದಿ ಕಾಯುವ ಅಗತ್ಯವಿಲ್ಲ. ಪೊಲೀಸರಿಗೆ ನ್ಯಾಯುಯುತವಾಗಿ ಸಿಗಬೇಕಾದ ಎಲ್ಲ ಸೌಲಭ್ಯಗಳು ಸಿಗಲಿವೆ ಎಂದು ಪ್ರವೀಣ್ ಸೂದ್ ತಿಳಿಸಿದರು.

ಇದಕ್ಕೂ ಮುನ್ನ ಎಸ್‌ಪಿ ಕಚೇರಿಯಲ್ಲಿ ಪೊಲೀಸ್ ಮಹಾನಿರ್ದೇಶಕರು ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲೆಯಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆ ವಿರುದ್ಧ ಕಾರ್ಯಾಚರಣೆ ಚುರುಕಾಗಬೇಕು. ಮುಖ್ಯವಾಗಿ ಅಪಾಯಕಾರಿ ಡಿಸೈನರ್‌ ಡ್ರಗ್ಸ್‌ ಬಳಕೆಯಿಂದ ಯುವ ಸಮುದಾಯ ಹಾಳಾಗುವುದನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್‌ ಲಾಕ್‌ಡೌನ್ ಸಂದರ್ಭ ಕಾನೂನು ಸುವ್ಯವಸ್ಥೆ ಹಾಗೂ ಮಾನವೀಯ ನೆಲೆಯಲ್ಲಿ ಉಡುಪಿ ಪೊಲೀಸರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಸೂದ್‌ ಶ್ಲಾಘಿಸಿದರು.

ಎಸ್‌ಪಿ ವಿಷ್ಣುವರ್ಧನ್‌, ಕರಾವಳಿ ಕಾವಲುಪಡೆಯ ಎಸ್‌ಪಿ ಆರ್‌.ಚೇತನ್‌, ಹೆಚ್ಚುವರಿ ಎಸ್‌ಪಿ ಕುಮಾರ ಚಂದ್ರ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT