ಉಡುಪಿ: ಮಲ್ಪೆಯ ಮೀನುಗಾರಿಕಾ ಬಂದರಿನಿಂದ ಮಲ್ಪೆ ಬೀಚ್ ಹಾಗೂ ತೊಟ್ಟಂ ಚರ್ಚ್ವರೆಗೆ ಬೀದಿ ದೀಪಗಳು ಸಮರ್ಪಕವಾಗಿ ಉರಿಯದೆ ಸ್ಥಳೀಯರು ಸಮಸ್ಯೆ ಎದುರಿಸುವಂತಾಗಿದೆ ಎಂದು ಮಲ್ಪೆಯ ಅಂಬೇಡ್ಕರ್ ಯುವಸೇನೆಯಿಂದ ಪ್ರತಿಭಟನೆ ನಡೆಸಲಾಯಿತು.
ದಲಿತ ಮುಖಂಡ ಜಯನ್ ಮಲ್ಪೆ ಮಾತನಾಡಿ, ‘ಸ್ವಚ್ಚ, ಸುಂದರ ಉಡುಪಿ’ ನಿರ್ಮಾಣದ ಧ್ಯೇಯದೊಂದಿಗೆ ಆಡಳಿತಕ್ಕೆ ಬಂದ ನಗರಾಡಳಿತ ಕಣ್ಮುಚ್ಚಿ ಕುಳಿತಿದೆ. ಜನಪ್ರತಿನಿಧಿಗಳು ವಾರ್ಡ್ನ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಮಲ್ಪೆ ವ್ಯಾಪ್ತಿಯಲ್ಲಿ ಬೀದಿ ದೀಪಗಳ ಸಮಸ್ಯೆ ಹೆಚ್ಚಾಗಿದ್ದು, ಸಮಸ್ಯೆಗೆ ಸ್ಪಂದನೆ ಸಿಗುತ್ತಿಲ್ಲ. ಜನಪರವಾದ ಕೆಲಸಮಾಡಲು ಸಾಧ್ಯವಾಗದಿದ್ದರೆ ಜನಪ್ರತಿನಿಧಿಗಳು ಕುರ್ಚಿಯಿಂದ ಇಳಿಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ಗಣೇಶ್ ನೆರ್ಗಿ ಮಾತನಾಡಿ, ದಾರಿದೀಪದ ಅವ್ಯವಸ್ಥೆ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ದಲಿತರ ಸಮಸ್ಯೆ ದಪ್ಪಚರ್ಮದ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ಅವ್ಯವಸ್ಥೆ ವಿರುದ್ಧ ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದು, ಸಮಸ್ಯೆ ಬಗೆಹರಿಸದಿದ್ದರೆ ಅಂಬೇಡ್ಕರ್ ಯುವಸೇನೆ ತೀವ್ರ ಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಸುಂದರ ಕಪ್ಪೆಟ್ಟು, ಹರೀಶ್ ಸಾಲ್ಯಾನ್, ರಮೇಶ್ ಪಾಲ್, ಕೃಷ್ಣ ಶ್ರೀಯಾನ್, ಪ್ರಸಾದ್ ನೆರ್ಗಿ, ಭಗವಾನ್, ಗುಣವಂತ ತೊಟ್ಟಂ, ಸುರೇಶ್ ಪಾಲನ್, ಪ್ರಶಾಂತ್ ನೆರ್ಗಿ, ಕೃಷ್ಣ ಅಮೀನ್, ಶಶಿಕಲಾ ತೊಟ್ಟಂ, ಪೂರ್ಣಿಮಾ ನೆರ್ಗಿ, ಶಂಕರ್ ನೆರ್ಗಿ ಇದ್ದರು.