ಉಡುಪಿ: ಸಾರಿಗೆ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಪಾಂಗಳ ರಬೀಂದ್ರ ನಾಯಕ್ (99) ಶನಿವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರಿಯರು ಇದ್ದಾರೆ.
1922ರಲ್ಲಿ ಫೆ.9ರಂದು ಉಡುಪಿಯಲ್ಲಿ ಜನಿಸಿದ ಪಿ.ಆರ್.ನಾಯಕ್ ಮುಂಬೈ ವಿವಿಯಿಂದ ಭೌತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು, ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿಯಲ್ಲಿ ಟೆಕ್ನಾಲಜಿಸ್ಟ್ ಆಗಿ ಕಾರ್ಯ ನಿರ್ವಹಿಸಿದ್ದರು.
1951ರಲ್ಲಿ ಸಾರಿಗೆ ಉದ್ಯಮ ಪ್ರವೇಶಿಸಿದ ಪಿ.ಆರ್.ನಾಯಕ್ ಹನುಮಾನ್ ಟ್ರಾನ್ಸ್ಪೋರ್ಟ್ ಹಾಗೂ ಗಜಾನನ ಮೋಟಾರ್ಸ್ ಕಂಪನಿಯನ್ನು ಮುನ್ನಡೆಸಿದ್ದರು. ಕರಾವಳಿಯ ಸಾರಿಗೆ ಕ್ಷೇತ್ರವನ್ನು ಬಲಪಡಿಸುವಲ್ಲಿ ನಾಯಕ್ ಅವರ ಪರಿಶ್ರಮ ದೊಡ್ಡದು.
ರಬೀಂದ್ರ ನಾಯಕ್ ಅವರ ನಿಧನಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಶಾಸಕ ರಘುಪತಿ ಭಟ್ ಸಂತಾಪ ಸೂಚಿಸಿದ್ದಾರೆ.