ಉಡುಪಿ: ಜಿಲ್ಲೆಯಾದ್ಯಂತ ಮುಂಗಾರು ಬಿರುಸಾಗಿದ್ದು, ಬೈಂದೂರು, ಕುಂದಾಪುರ, ಹೆಬ್ರಿ, ಬ್ರಹ್ಮಾವರ, ಉಡುಪಿ ಭಾಗಗಳಲ್ಲಿ ಗುರುವಾರ ಉತ್ತಮ ಮಳೆಯಾಗಿದೆ.
ಗುರುವಾರ ದಿನವಿಡೀ ಮೋಡಕವಿದ ವಾತಾವರಣವಿದ್ದು, ಆಗಾಗ ಬಿರುಸಾಗಿ ಮಳೆ ಸುರಿಯಿತು. ಗಾಳಿಯ ಅಬ್ಬರವೂ ಜೋರಾಗಿತ್ತು.ಬುಧವಾರ ರಾತ್ರಿ ಸುರಿದ ಬಿರುಸಿನ ಮಳೆಗೆ ಹಳ್ಳಗಳು, ತೊರೆಗಳು ಉಕ್ಕಿ ಹರಿದಿವೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.ಬೈಂದೂರಿನಲ್ಲಿ ಮನೆಗಳ ಮೇಲೆ ಮರಬಿದ್ದು ಭಾಗಶಃ ಹಾನಿಯಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿಯಲ್ಲಿ 86.6 ಮಿ.ಮೀ, ಕುಂದಾಪುರದಲ್ಲಿ 107.4, ಕಾರ್ಕಳದಲ್ಲಿ 79.5 ಮಿ.ಮೀ ಮಳೆ ಸುರಿದಿದ್ದು, ಜಿಲ್ಲೆಯಲ್ಲಿ 9.3 ಸೆ.ಮೀ ಮಳೆ ಬಿದ್ದಿದೆ.
ಜೂನ್ 12ರಿಂದ ಕರಾವಳಿಯಲ್ಲಿ ಬಿರುಸಿನ ಮಳೆ ಸುರಿಯಲಿದೆ. ಮಳೆಯ ಪ್ರಮಾಣ 125 ಮಿ.ಮೀಗಿಂತ ಹೆಚ್ಚಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.