ಉಡುಪಿ: ಜಿಲ್ಲೆಯಾದ್ಯಂತ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸಿದೆ. ಕುಂದಾಪುರ, ಬ್ರಹ್ಮಾವರ, ಹೆಬ್ರಿ, ಕಾಪು, ಬೈಂದೂರು, ಕಾರ್ಕಳ ಹಾಗೂ ಉಡುಪಿ ತಾಲ್ಲೂಕುಗಳಲ್ಲಿ ಸೋಮವಾರವೂ ಬಿರುಸಿನ ಮಳೆ ಸುರಿಯಿತು.
ಗಾಳಿ ಮಳೆಗೆ ಜಿಲ್ಲೆಯಾದ್ಯಂತ ಹಲವು ಮನೆಗಳು ಕುಸಿದುಬಿದ್ದಿವೆ. ತೋಟಗಾರಿಕಾ ಬೆಳೆ ನಾಶವಾಗಿದೆ. ಮರಗಳು ಬುಡಮೇಲಾಗಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಸೋಮವಾರ ದಿನವಿಡೀ ಮಳೆ ಸುರಿಯಿತು. ದಟ್ಟವಾದ ಮೋಡ ಕವಿದು ಸೂರ್ಯನ ದರ್ಶನವಾಗಲಿಲ್ಲ. ಗಾಳಿಯ ಅಬ್ಬರ ಜೋರಾಗಿತ್ತು.
ರೆಡ್ ಅಲರ್ಟ್:
ಕರಾವಳಿಯ ಜಿಲ್ಲೆಗಳಲ್ಲಿ ಜೂನ್ 19ರವರೆಗೂ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜೂನ್ 15 ಹಾಗೂ 16ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಎರಡೂ ದಿನ 11.5 ಸೆಂ.ಮೀನಿಂದ 20ಸೆಂ.ಮೀವರೆಗೂ ಮಳೆ ಬೀಳುವ ಸಾಧ್ಯತೆಗಳಿವೆ. ಜೂನ್ 17 ಹಾಗೂ 18ರಂದು ಆರೆಂಜ್ ಅಲರ್ಟ್ ಹಾಗೂ 19ರಂದು ಯಲ್ಲೊ ಅಲರ್ಟ್ ಮುನ್ಸೂಚನೆ ನೀಡಲಾಗಿದೆ.
ಸೋಮವಾರ ಸುರಿದ ಮಳೆಗೆ 88 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ₹ 7.9 ಲಕ್ಷ ಹಾನಿಯಾಗಿದೆ. 2.1 ಕಿ.ಮೀ ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದೆ. ಜೂನ್ 1ರಿಂದ 14ರವರೆಗೆ ಜಿಲ್ಲೆಯಲ್ಲಿ ಸುರಿದ ಮಳೆಗೆ ಇದುವರೆಗೂ 335 ವಿದ್ಯುತ್ ಕಂಬಗಳು ಬಿದ್ದಿವೆ. 39 ಟ್ರಾನ್ಸ್ಫರಂಗಳು ಸುಟ್ಟುಹೋಗಿವೆ. 9 ಕಿ.ಮೀ ವಿದ್ಯುತ್ ಮಾರ್ಗ ಹಾಳಾಗಿದೆ. ₹ 78.64 ಲಕ್ಷ ನಷ್ಟ ಸಂಭವಿಸಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೃಷಿ ಭೂಮಿ ಜಲಾವೃತಗೊಂಡಿದೆ. ಬಾಳೆ ಸೇರಿದಂತೆ ಹಲವು ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ.