ಉಡುಪಿ: ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಹಾಗೂ ಸಂಘ ಪರಿವಾರ ನಡೆಸಿರುವ ಷಡ್ಯಂತ್ರದ ಭಾಗವೇ ಹಿಜಾಬ್ ವಿವಾದ ಎಂದು ಎಸ್ಡಿಪಿಐ ಮುಖಂಡ ಅತಾವುಲ್ಲ ಜೋಕಟ್ಟೆ ಆರೋಪಿಸಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಪು ಪುರಸಭೆಯಲ್ಲಿ ಮೂವರು ಎಸ್ಡಿಪಿಐ ಸದಸ್ಯರು ಗೆದ್ದಿದ್ದಕ್ಕೆ ಹತಾಶೆ ಹಾಗೂ ಭಯಗೊಂಡಿರುವ ಶಾಸಕ ರಘುಪತಿ ಭಟ್ ಹಿಜಾಬ್ ವಿಚಾರದಲ್ಲಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಶಾಸಕರ ಹೇಳಿಕೆಗಳು ನಿರಾಧಾರ’ ಎಂದರು.
ಎಸ್ಡಿಪಿಐ ಪಕ್ಷಕ್ಕೆ ಕೇವಲ ಮುಸ್ಲಿಂ ಮತಗಳು ಮಾತ್ರವಲ್ಲ; ಎಲ್ಲ ವರ್ಗದವರು ಮತ ಹಾಕುತ್ತಿದ್ದಾರೆ. ಕಾಪು ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 9 ಅಭ್ಯರ್ಥಿಗಳಲ್ಲಿ ಮೂವರು ಗೆದ್ದಿದ್ದು, ಅವರಲ್ಲಿ ಮುಸ್ಲಿಮೇತರರು ಇದ್ದಾರೆ ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಕಾಪು ಪುರಸಭೆಯಲ್ಲಿ ಎಸ್ಡಿಪಿಐಗೆ ಮೂರು ಸೀಟು ಬಂದಿರುವುದರಿಂದ ರಘುಪತಿ ಭಟ್ ಆತಂಕಗೊಂಡದ್ದಾರೆ ಎಂದು ವ್ಯಂಗ್ಯವಾಡಿದರು.
ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕೊಡಲಾಗಿದ್ದು, ಎಲ್ಲರಿಗೂ ಅವರವರ ಧರ್ಮಗಳನ್ನು ಅನುಸರಿಸುವ ಪಾಲಿಸುವ ಹಕ್ಕುಗಳನ್ನು ಕೊಡಲಾಗಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಕಾಲೇಜಿಗೆ ಹೋಗುವುದು ಅವರ ವೈಯಕ್ತಿಕ ವಿಚಾರ ಹಾಗೂ ಧಾರ್ಮಿಕ ವಿಚಾರ ಎಂದರು.
ಉಡುಪಿ ಹಾಗೂ ಕುಂದಾಪರ ಕಾಲೇಜುಗಳಲ್ಲಿ ಹಿಂದಿನಿಂದಲೂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿಯೇ ಕಾಲೇಜಿಗೆ ಹೋಗುತ್ತಿದ್ದರು. ಆಗ ಸುಮ್ಮನಿದ್ದು ಈಗ ಹಿಜಾಬ್ಗೆ ಅಡ್ಡಿಪಡಿಸಲಾಗುತ್ತಿದೆ ಎಂದರು.