ಉಡುಪಿ: ಕೊರೊನಾ ಸೋಂಕು ಹರಡುವಿಕೆಯ ತಡೆಗೆ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ಭಕ್ತರಿಂದ ಸೇವೆಗಳನ್ನು ಸ್ವೀಕರಿಸುವುದಿಲ್ಲ ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ದೇವರಿಗೆ ನಿತ್ಯದ ಪೂಜೆಗಳು ಎಂದಿನಂತೆ ನಡೆಯಲಿವೆ. ಭಕ್ತರು ಮನೆಯಲ್ಲಿದ್ದುಕೊಂಡೇ ದೇವರಿಗೆ ಪ್ರಾರ್ಥಿಸಬೇಕು ಎಂದು ಸ್ವಾಮೀಜಿ ಮನವಿ ಮಾಡಿದ್ದಾರೆ.
ಸ್ವಾಮೀಜಿ ಕರೆ:ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನತಾ ಕರ್ಫ್ಯೂಗೆ ಕರೆ ನೀಡಿದ್ದಾರೆ. ಸಾರ್ವಜನಿಕರ ದೃಷ್ಟಿಯಿಂದ ಸರ್ಕಾರದ ಸೂಚನೆಯನ್ನು ಎಲ್ಲರೂ ಪಾಲಿಸೋಣ. ಭಾನುವಾರ ಮನೆಯಲ್ಲಿದ್ದುಕೊಂಡು ಸೋಂಕು ವ್ಯಾಪಿಸದಂತೆ ತಡೆಯೋಣ ಎಂದು ಸ್ವಾಮೀಜಿ ಕರೆ ನೀಡಿದರು.
ಕೃಷ್ಣಮಠದಲ್ಲಿ ಎಂದಿನಂತೆ ಪೂಜೆಗಳು ನಡೆಯುತ್ತವೆ. ಆದರೆ, ಭಕ್ತರು ಮನೆಯಲ್ಲಿದ್ದುಕೊಂಡೇ ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕು. ಕೃಷ್ಣನ ಜಪ ಮಾಡುವ ಮೂಲಕ ರೋಗವನ್ನು ದೂರವಿಡಬೇಕು ಎಂದು ಶ್ರೀಗಳು ಸಲಹೆ ನೀಡಿದರು.