ಉಡುಪಿ: ಭಾರಿ ಮಳೆಯಿಂದ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಇರುವ ಹೆಬ್ರಿ ತಾಲ್ಲೂಕು ಮಡಾಮಕ್ಕಿ ಬಳಿಯ ಕೋಟೆರಾಯನಬೆಟ್ಟ ಸುಮಾರು ಮೂರು ಕಿ.ಮೀ ಉದ್ದದಷ್ಟು ಜರಿದಿದೆ. ಕುಸಿತವಾದ ಪ್ರದೇಶದಲ್ಲಿ ದೊಡ್ಡಹಳ್ಳಗಳು ನಿರ್ಮಾಣವಾಗಿವೆ. ಮಳೆಯ ನೀರಿನ ರಭಸಕ್ಕೆ ಬೆಟ್ಟದ ಮೇಲಿನ ಮಣ್ಣು ಬುಡದಲ್ಲಿರುವ ಮನ್ನಾಡಿ ಗ್ರಾಮದ ಸಮೀಪಕ್ಕೆ ಬಂದು ಬಿದ್ದಿದೆ.
ಮನ್ನಾಡಿ ಹಾಗೂ ಅಗಳಿಬೈಲು ಗ್ರಾಮಗಳಲ್ಲಿ 50 ಕುಟುಂಬಗಳು ವಾಸವಿದ್ದು, ಪಶ್ಚಿಮಘಟ್ಟದಲ್ಲಿ ಮಳೆ ಮತ್ತೆ ಬಿರುಸಾದರೆ ಮನೆಗಳ ಮೇಲೆ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಬೆಟ್ಟದಲ್ಲಿ ಕೋಟೆರಾಯನ ದೇವಸ್ಥಾನವಿದ್ದು, ವರ್ಷಕ್ಕೊಮ್ಮೆ ಇಲ್ಲಿ ಡಕ್ಕೆಬಲಿ ಸೇವೆ ನಡೆಯುತ್ತದೆ.
‘ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬೆಟ್ಟದ ಕೆಳಗಿರುವ ಗ್ರಾಮಗಳಿಗೆ ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದರು.