ಕುಂದಾಪುರ: ‘ರಾಜ್ಯದ ಕೋಲಾರ, ಕೊಪ್ಪಳದಲ್ಲಿ ನಡೆದ ಅಸ್ಪೃಶ್ಯತೆ ಘಟನೆ ಅತ್ಯಂತ ಕ್ರೌರ್ಯವಾದುದು. ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಇಂತಹ ಹೇಯ ಕೃತ್ಯ ನಡೆಸಿದವರಿಗೆ ಕಾನೂನಿಯಡಿಯಲ್ಲಿ ಕಠಿಣ ಶಿಕ್ಷೆ ಕೊಡಬೇಕು. ಅಸ್ಪೃಶ್ಯತೆ ವಿರುದ್ಧ ಶ್ರೀರಾಮ ಸೇನೆ ಹೋರಾಟ ಮಾಡುತ್ತಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ, ಅಸ್ಪೃಶ್ಯತೆ ವಿಚಾರದಲ್ಲಿ ಡಾ.ಅಂಬೇಡ್ಕರ್ ಅವರ ಕನಸು ನನಸಾಗದಿರುವುದು ನಮ್ಮ ವ್ಯವಸ್ಥೆಯ ದುರಂತ’ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಶನಿವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಹತ್ಯೆಯಾದ ಸುಳ್ಯದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿರುವುದು ಸ್ವಾಗತಾರ್ಹ. ಆದರೆ ಗುತ್ತಿಗೆ ಕೆಲಸಕ್ಕೆ ಜೀವನ ಭದ್ರತೆ ಇಲ್ಲದೆ ಇರುವುದರಿಂದ, ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕಾಯಂ ಕೆಲಸ ಕೊಡುಸುವ ನಿಟ್ಟಿನಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ರಾಜ್ಯದ ಹಲವು ಕಡೆಗಳಲ್ಲಿ ಈ ರೀತಿ ಮತಾಂಧ ಶಕ್ತಿಗಳಿಗೆ ಬಲಿಯಾಗಿರುವ ಅನೇಕ ಕುಟುಂಬಗಳು ಸಂಕಷ್ಟದ ಸ್ಥಿತಿಯಲ್ಲಿ ಇವೆ. ಈ ಕುಟುಂಗಳಿಗೂ ಆಧಾರವಾಗುವ ಹಾಗೂ ಆಸರೆ ನೀಡುವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು. ರಾಜಕೀಯ ಲಾಭ ಪಡೆದುಕೊಂಡ ಪರೇಶ್ಷ ಮೇಸ್ತಾ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ತನಿಖೆ ನಿಂತ ನೀರಿನಂತಾಗಿದೆ. ಈ ಪ್ರಕರಣಗಳ ಶೀಘ್ರ ತನಿಖೆ ನಡೆದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಇಚ್ಛಾ ಶಕ್ತಿ ತೋರಬೇಕಿದೆ’ ಎಂದರು.
‘ಶ್ರೀರಾಮ ಸೇನೆಯು ರಾಜಕೀಯ ಪಕ್ಷವಲ್ಲ, ಮುಂಬರುವ ಯಾವುದೇ ಚುನಾವಣೆಯಲ್ಲಿ, ನನ್ನನ್ನು ಸೇರಿದಂತೆ ಶ್ರೀರಾಮ ಸೇನೆಯ ಯಾರೂ ಸ್ಪರ್ಧಿಸುವುದಿಲ್ಲ’ ಎಂದರು.
‘ಕುಂದಾಪುರ ಪುರಸಭೆಯ ಎದುರಿನ ಸಾರ್ವಜನಿಕ ರಸ್ತೆಗೆ ಡಾಂಬರು ಹಾಕಿ ಅಭಿವೃದ್ಧಿಪಡಿಸಲು ಇಲ್ಲಿನ ಮುಸ್ಲಿಂ ಸಮುದಾಯದವರು ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಸ್ಥಳೀಯಾಡಳಿತ ಕ್ರಮ ಕೈಗೊಳ್ಳಬೇಕು. ಸರ್ಕಾರ, ಸಚಿವರು ಹಾಗೂ ಶಾಸಕರು ಈ ಕುರಿತು ಗಮನ ನೀಡಬೇಕು. ಕುಂದಾಪುರದ ಸರ್ಕಾರಿ ಕಾಲೇಜಿನ ಆವರಣದ ಒಳಗಿರುವ ದರ್ಗಾ ಗೋಡೆಯ ಬಗ್ಗೆಯೂ ದಾಖಲೆಗಳನ್ನು ಕಲೆ ಹಾಕಲಾಗುತ್ತಿದೆ, ದಾಖಲೆ ದೊರೆಕಿದ ಬಳಿಕ ಮುಂದಿನ ಹೋರಾಟ ಸಂಘಟಿಸಲಾಗುವುದು’ ಎಂದರು.
ಶ್ರೀರಾಮ ಸೇನೆಯ ಮಂಗಳೂರು ವಿಭಾಗದ ಮುಖಂಡ ಮೋಹನ್ ಭಟ್, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಜಯರಾಂ ಅಂಬೇಕಲ್ಲು, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಶೆಟ್ಟಿ ಕುಂದಾಪುರ, ವಕ್ತಾರ ಶರತ್ ಮಣಿಪಾಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.